ಪದ್ಯ ೧೦: ಅರ್ಜುನನ ನಿಪುಣತೆ ಹೇಗಿತ್ತು?

ಬಾಗಿಸಿದ ಬಿಲ್ಲಿನಲಿ ರಾಯರ
ಮೂಗಕೊಯ್ದನು ಮದುವೆಯಲಿ ನೀ
ನೀಗಳೊದರುವೆ ಕೌರವೇಂದ್ರನನಂದು ಬಿಡಿಸಿದೆಲ
ಆ ಗರುವ ಸೈಂಧವನ ಮುಡಿಯ ವಿ
ಭಾಗಿಸಿದ ಭಟನಾರು ಪಾರ್ಥನ
ಲಾಗುವೇಗವನಾರು ಬಲ್ಲರು ಕರ್ಣ ಕೇಳೆಂದ (ವಿರಾಟ ಪರ್ವ, ೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ದ್ರೌಪದಿಯ ಸ್ವಯಂವರದಲ್ಲಿ ಸೇರಿದ್ದ ಎಲ್ಲಾ ರಾಜರ ಮೂಗನ್ನು ಮುರಿಯುವಂತೆ ಬಿಲ್ಲನ್ನು ಹೆದೆಯೇರಿಸಲಿಲ್ಲವೇ? ಈಗ ನೀನು ಒದರುತ್ತಿದ್ದೀಯಲ್ಲಾ, ಘೋಷಯಾತ್ರೆಯಲ್ಲಿ ಸೆರೆಸಿಕ್ಕ ಕೌರವನನ್ನು ಬಿಡಿಸಿದವರಾರು ಸೈಂಧವನ ಮುಡಿಯನ್ನು ಕತ್ತರಿಸಿದವರು ಯಾರು? ಅರ್ಜುನನು ಬಾಣ ತೆಗೆಯುವುದನ್ನು, ಅದನ್ನು ಹೂಡಿ, ಬಿಡುವ ಚತುರತೆಯನ್ನು ಯಾರು ಬಲ್ಲರು ಎಂದು ಕೃಪಾಚಾರ್ಯರು ಕರ್ಣನಿಗೆ ಕೇಳಿದನು.

ಅರ್ಥ:
ಬಾಗಿಸು: ಎರಗು; ಬಿಲ್ಲು: ಚಾಪ, ಧನುಸ್ಸು; ರಾಯ: ರಾಜ; ಮೂಗು: ನಾಸಿಕ; ಕೊಯ್ದು: ಸೀಳು; ಮದುವೆ: ವಿವಾಹ; ಒದರು: ಹೇಳು; ಬಿಡಿಸು: ಕಳಚು, ಸಡಿಲಿಸು; ಗರುವ: ಹಿರಿಯ, ಶ್ರೇಷ್ಠ; ಮುಡಿ: ಶಿರ; ವಿಭಾಗಿಸು: ಭಾಗ ಮಾಡು, ವಿಂಗಡಿಸು; ಭಟ: ಸೈನಿಕ; ಲಾಗು:ರಭಸ, ತೀವ್ರತೆ; ವೇಗ: ರಭಸ; ಬಲ್ಲರು: ತಿಳಿಯರು; ಕೇಳು: ಆಲಿಸು;

ಪದವಿಂಗಡಣೆ:
ಬಾಗಿಸಿದ +ಬಿಲ್ಲಿನಲಿ +ರಾಯರ
ಮೂಗಕೊಯ್ದನು +ಮದುವೆಯಲಿ +ನೀನ್
ಈಗಳ್+ಒದರುವೆ +ಕೌರವೇಂದ್ರನನ್+ಅಂದು+ ಬಿಡಿಸಿದೆಲ
ಆ +ಗರುವ +ಸೈಂಧವನ +ಮುಡಿಯ +ವಿ
ಭಾಗಿಸಿದ+ ಭಟನಾರು +ಪಾರ್ಥನ
ಲಾಗುವೇಗವನ್+ಆರು +ಬಲ್ಲರು +ಕರ್ಣ +ಕೇಳೆಂದ

ಅಚ್ಚರಿ:
(೧) ರಾಜರನ್ನು ಅವಮಾನಿಸಿದ ಎಂದು ಹೇಳುವ ಪರಿ – ಬಾಗಿಸಿದ ಬಿಲ್ಲಿನಲಿ ರಾಯರ ಮೂಗಕೊಯ್ದನು ಮದುವೆಯಲಿ

ನಿಮ್ಮ ಟಿಪ್ಪಣಿ ಬರೆಯಿರಿ