ಪದ್ಯ ೩೫: ಉತ್ತರನೇಕೆ ಬೆರಗಾದ?

ಹೊರಗೆ ತೊಗಲಲಿ ಬಿಗಿದು ಕೆಲಬಲ
ನರಿಯದಂದೈ ಪಾಂಡುನಂದನ
ರುರುವ ಕೈದುವ ಕಟ್ಟಿದರು ಹೆಣನಲ್ಲ ತೆಗೆಯೆನಲು
ಸೆರಗನಳವಡಿಸಿಕ್ಕಿ ಭೀತಿಯ
ತೊರೆದು ತುದಿಗೇರಿದನು ನೇಣ್ಗಳ
ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು (ವಿರಾಟ ಪರ್ವ, ೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಉತ್ತರನ ಮಾತನ್ನು ಕೇಳಿದ ಅರ್ಜುನನು, ಎಲೈ ಉತ್ತರ ಅದು ಹೆಣವಲ್ಲ, ಪಾಂಡವರು ತಮ್ಮ ಆಯುಧಗಳನ್ನು ತೊಗಲಿನಲ್ಲಿ ಕಟ್ಟಿ ಇಲ್ಲಿಟ್ಟಿದ್ದಾರೆ, ಇದು ಬೇರೆಯವರಿಗೆ ತಿಳಿಯಬಾರದೆಂದು ಈ ಉಪಾಯ ಮಾಡಿದ್ದಾರೆ, ಅದನ್ನು ತೆಗೆ ಎಂದು ಹೇಳಿದನು. ಉತ್ತರನು ತನ್ನ ಉತ್ತರೀಯವನ್ನು ಕಟ್ಟಿಕೊಂಡು, ಮೇಲಕ್ಕೆ ಹತ್ತಿ ಹಗ್ಗಗಳನ್ನು ಬಿಚ್ಚಿ ಒಳಗಿದ್ದ ಆಯುಧಗಳನ್ನು ನೋಡಿ ಬೆರಗಾದನು.

ಅರ್ಥ:
ಹೊರಗೆ: ಆಚೆ; ತೊಗಲು: ಚರ್ಮ; ಬಿಗಿ: ಬಂಧಿಸು; ಕೆಲಬಲ: ಅಕ್ಕಪಕ್ಕ, ಎಡಬಲ; ಅರಿ: ತಿಳಿ; ನಂದನ: ಮಕ್ಕಳು; ಉರುವ: ಶ್ರೇಷ್ಠ; ಕೈದು: ಆಯುಧ; ಕಟ್ಟು: ಬಂಧಿಸು; ಹೆಣ: ಜೀವವಿಲ್ಲದ ದೇಹ; ತೆಗೆ: ಹೊರತರು; ಸೆರಗ: ಉತ್ತರೀಯ; ಅಳವಡಿಸು: ಸರಿಮಾಡಿಕೋ; ಭೀತಿ: ಭಯ; ತೊರೆ: ಹೊರಹಾಕು; ತುದಿ: ಅಗ್ರಭಾಗ; ಏರು: ಮೇಲೆ ಹತ್ತು; ನೇಣು: ಹಗ್ಗ; ಹರಿದು: ಬಿಚ್ಚು; ಕಂಡು: ನೋಡಿ; ಅಂಜು: ಹೆದರು; ಭಯ: ಅಂಜಿಕೆ;

ಪದವಿಂಗಡಣೆ:
ಹೊರಗೆ +ತೊಗಲಲಿ +ಬಿಗಿದು +ಕೆಲಬಲನ್
ಅರಿಯದಂದೈ+ ಪಾಂಡುನಂದನರ್
ಉರುವ +ಕೈದುವ +ಕಟ್ಟಿದರು +ಹೆಣನಲ್ಲ+ ತೆಗೆ+ಎನಲು
ಸೆರಗನ್+ಅಳವಡಿಸಿಕ್ಕಿ+ ಭೀತಿಯ
ತೊರೆದು +ತುದಿಗೇರಿದನು +ನೇಣ್ಗಳ
ಹರಿದು +ಕೈದುವ +ಬಿಟ್ಟು +ಕಂಡ್+ಅಂಜಿದನು +ಭಯ +ಹೊಡೆದು

ಅಚ್ಚರಿ:
(೧) ಆಯುಧಗಳನ್ನು ನೋಡಿ ಉತ್ತರನಿಗಾದ ಅನುಭವ – ನೇಣ್ಗಳ ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು

ನಿಮ್ಮ ಟಿಪ್ಪಣಿ ಬರೆಯಿರಿ