ಪದ್ಯ ೩೨: ಉತ್ತರನೇಕೆ ಅರ್ಜುನನನ್ನು ಒಡೆಯನೆಂದು ಹೇಳಿದ?

ನಡೆಗೊಳಿಸಿದನು ರಥವ ಮುಂದಕೆ
ನಡೆಸುತುತ್ತರ ನುಡಿದ ಸಾರಥಿ
ಕೆಡಿಸದಿರು ವಂಶವನು ರಾಯನ ಹಿಂದೆ ಹೆಸರಿಲ್ಲ
ಬಿಡು ಮಹಾಹವವೆನಗೆ ನೂಕದು
ತೊಡೆಯದಿರು ನೊಸಲಕ್ಕರವ ನೀ
ನೊಡೆಯ ಕಿಂಕರರಾಗಿಹೆವು ನಾವಿಂದು ಮೊದಲಾಗಿ (ವಿರಾಟ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಉತ್ತರನು ರಥವನ್ನು ಮುಂದಕ್ಕೆ ಚಲಿಸುತ್ತಾ, ಈಗ ನಾನು ಸಾರಥಿ, ನಾನು ಸತ್ತರೆ ನಮ್ಮಪ್ಪನ ಹೆಸರು ಹೇಳಲು ಇನ್ನೊಬ್ಬರಿಲ್ಲ, ನಮ್ಮ ವಂಶವನ್ನು ನಾಶಮಾಡಬೇಡ, ಈ ಮಹಾಯುದ್ಧವು ನನ್ನಕೈಯ್ಯಲ್ಲಾಗುವುದಿಲ್ಲ. ಬದುಕಬೇಕೆಂದು ಹಣೆಯ ಮೇಲೆ ಬರೆದಿರುವ ಅಕ್ಷರವನ್ನು ನೀನು ಅಳಿಸಬೇಡ, ಇಂದಿನಿಂದ ನೀನೇ ಒಡೆಯ ನಾನೆ ಸೇವಕನೆಂದು ತಿಳಿಸಿದ.

ಅರ್ಥ:
ನಡೆ: ಚಲಿಸು; ರಥ: ಬಂಡಿ; ಮುಂದೆ: ಎದುರು; ನುಡಿ: ಮಾತಾಡು; ಸಾರಥಿ: ಸೂತ; ಕೆಡಿಸು: ಹಾಳುಮಾದು; ವಂಶ: ಕುಲ; ರಾಯ: ರಾಜ; ಹಿಂದೆ: ಹಿಂಬದಿ; ಹೆಸರು: ನಾಮ; ಬಿಡು: ತೊರೆ; ಮಹಾಹವ: ದೊಡ್ಡ ಯುದ್ಧ; ನೂಕು: ತಳ್ಳು; ತೊಡೆ: ಒರಸು, ಅಳಿಸು; ನೊಸಲು: ಹಣೆ; ಅಕ್ಕರ: ಅಕ್ಷರ; ಒಡೆಯ: ರಾಜ, ಯಜಮಾನ; ಕಿಂಕರ: ಸೇವಕ;

ಪದವಿಂಗಡಣೆ:
ನಡೆಗೊಳಿಸಿದನು +ರಥವ +ಮುಂದಕೆ
ನಡೆಸುತ್+ಉತ್ತರ +ನುಡಿದ +ಸಾರಥಿ
ಕೆಡಿಸದಿರು +ವಂಶವನು +ರಾಯನ +ಹಿಂದೆ +ಹೆಸರಿಲ್ಲ
ಬಿಡು +ಮಹಾಹವವ್+ಎನಗೆ +ನೂಕದು
ತೊಡೆಯದಿರು+ ನೊಸಲ್+ಅಕ್ಕರವ+ ನೀನ್
ಒಡೆಯ +ಕಿಂಕರರ್+ಆಗಿಹೆವು +ನಾವಿಂದು +ಮೊದಲಾಗಿ

ಅಚ್ಚರಿ:
(೧) ಹಣೆಬರಹ ಎಂದು ಹೇಳಲು – ನೊಸಲಕ್ಕರ
(೨) ನಾನು ದಾಸನೆಂದು ಹೇಳುವ ಪರಿ – ನೀನೊಡೆಯ ಕಿಂಕರರಾಗಿಹೆವು ನಾವಿಂದು ಮೊದಲಾಗಿ

ನಿಮ್ಮ ಟಿಪ್ಪಣಿ ಬರೆಯಿರಿ