ಪದ್ಯ ೭: ಉತ್ತರನು ಬೃಹನ್ನಳೆಗೆ ಏನು ಹೇಳಿದ?

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಮ್ಮಟಿಗೆಯನು ಬಿಸುಡು
ಮಿಸುಗಬಾರದು ಪ್ರಳಯಕಾಲನ
ಮುಸುಕನುಗಿವವರಾರು ಕೌರವ
ನಸಮಬಲನೈ ರಥವ ಮರಳಿಸು ಜಾಳಿಸುವೆನೆಂದ (ವಿರಾಟ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಹಸಿದಿರುವ ಮಾರಿಗಳ ಗುಂಪಿನಲ್ಲಿ ಕುರಿಯು ಬಂದು ಹೊಕ್ಕಂತೆ ಆಗಿದೆ ನನ್ನ ಸ್ಥಿತಿ ಬೃಹನ್ನಳೆ, ಕುದುರೆಗಳ ಓಟವನ್ನು ನಿಲ್ಲಿಸು, ಬಾರುಕೋಲನ್ನು ಕೆಳಕ್ಕೆ ಬಿಸಾಡು, ಈ ಸೈನ್ಯದೆದುರಿಗೆ ಕದಲಲೂ ಬಾರದು, ಪ್ರಳಯಕಾಲದ ಯಮನು ಮುಖಕ್ಕೆ ಹಾಕಿಕೊಂಡಿರುವ ಮುಸುಕನ್ನು ಯಾರಾದರೂ ತೆಗೆಯುವರೇ? ಕೌರವನು ಮಹಾ ಬಲಶಾಲಿ, ರಥವನ್ನು ಹಿಮ್ದಕ್ಕೆ ತಿರುಗಿಸು, ಓಡಿ ಹೋಗೋಣವೆಂದು ಉತ್ತರನು ಬೃಹನ್ನಳೆಗೆ ಹೇಳಿದನು.

ಅರ್ಥ:
ಹಸಿ: ಆಹಾರವನ್ನು ಬಯಸು; ಮಾರಿ: ಕ್ಷುದ್ರದೇವತೆ; ಮಂದೆ: ಗುಂಪು, ಸಮೂಹ; ಕುರಿ: ಮೇಷ; ನುಸುಳು: ತೂರುವಿಕೆ, ನುಣುಚಿಕೊಳ್ಳುವಿಕೆ; ಎಸಗು: ಮಾಡು, ವ್ಯವಹರಿಸು; ತೇಜಿ: ಕುದುರೆ; ತಡೆ: ನಿಲ್ಲಿಸು; ಚಮ್ಮಟಗೆ: ಚಾವಟಿ; ಬಿಸುಡು: ತೊರೆ, ಹೊರಹಾಕು; ಮಿಸುಗು: ಕದಲು, ಅಲುಗು; ಪ್ರಳಯಕಾಲ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶದ ಸಮಯ; ಮುಸುಕು: ಹೊದಿಕೆ; ಉಗಿ: ಹೊರಹಾಕು; ಅಸಮಬಲ: ಅಪ್ರತಿಮ ಬಲಶಾಲಿ; ರಥ: ಬಂಡಿ; ಮರಳು: ಹಿಂದಿರುಗಿಸು; ಜಾಳಿಸು: ಚಲಿಸು, ನಡೆ;

ಪದವಿಂಗಡಣೆ:
ಹಸಿದ +ಮಾರಿಯ +ಮಂದೆಯಲಿ +ಕುರಿ
ನುಸುಳಿದಂತಾದೆನು+ ಬೃಹನ್ನಳೆ
ಯೆಸಗದಿರು +ತೇಜಿಗಳ+ ತಡೆ+ ಚಮ್ಮಟಿಗೆಯನು +ಬಿಸುಡು
ಮಿಸುಗಬಾರದು+ ಪ್ರಳಯಕಾಲನ
ಮುಸುಕನ್+ಉಗಿವವರಾರು+ ಕೌರವನ್
ಅಸಮಬಲನೈ+ ರಥವ+ ಮರಳಿಸು+ ಜಾಳಿಸುವೆನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಸಿದ ಮಾರಿಯ ಮಂದೆಯಲಿ ಕುರಿನುಸುಳಿದಂತಾದೆನು

ನಿಮ್ಮ ಟಿಪ್ಪಣಿ ಬರೆಯಿರಿ