ಪದ್ಯ ೫೬: ಮಲ್ಲಯುದ್ದವು ಹೇಗೆ ಮುಂದುವರೆಯಿತು?

ಅರರೆ ಸಿಕ್ಕಿದ ವಲಲ ಹೋಹೋ
ಅರರೆ ಸೋತನು ಮಲ್ಲನೆಂಬ
ಬ್ಬರವು ಮಸಗಿರೆ ಭೀಮ ಕೇಳಿದನಧಿಕ ರೋಷದಲಿ
ತಿರುಗಿ ಪೈಸರದಿಂದ ಮಲ್ಲನ
ನೊರಸಿದನು ಮುಷ್ಟಿಯಲಿ ನೆತ್ತಿಯ
ತರಹರಿಸೆ ಸಂತವಿಸಿ ತಿವಿದನು ಮಲ್ಲ ಮಾರುತಿಯ (ವಿರಾಟ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಅರೇ ವಲಲನು ಸಿಕ್ಕ, ಅರೇ ಜೀಮೂತನು ಸೋತ ಎಂದು ನೋಟಕರು ಕೂಗುತ್ತಿರಲು, ಭೀಮನದನ್ನು ಕೇಳಿ ಮಹಾರೋಷದಿಂದ ಮಗ್ಗುಲಿಗೆ ಜಾರಿ, ಜೀಮೂತನ ನೆತ್ತಿಯನ್ನು ಮುಷ್ಟಿಯಿಂದ ಹೊಡೆದನು. ಜೀಮೂತನು ಅತ್ತಿತ್ತ ಅದುರಿ ಭೀಮನನ್ನು ಹೊಡೆದನು.

ಅರ್ಥ:
ಸಿಕ್ಕು: ತೊಡಕು; ಸೋಲು: ಪರಾಭವ; ಮಲ್ಲ: ಜಟ್ಟಿ; ಅಬ್ಬರ: ಆರ್ಭಟ; ಮಸಗು: ತಿಕ್ಕು, ಕೆರಳು; ಕೇಳು: ಆಲಿಸು; ಅಧಿಕ: ಹೆಚ್ಚು; ರೋಷ: ಕೋಪ; ತಿರುಗು: ಸುತ್ತು, ಅಲೆದಾಡು; ಪೈಸರ: ಮಲ್ಲಯುದ್ಧದ ಒಂದು ಪಟ್ಟು, ಕುಗ್ಗು; ಒರಸು: ಸಾರಿಸು, ನಾಶಮಾಡು; ಮುಷ್ಟಿ: ಮುಚ್ಚಿದ ಅಂಗೈ; ನೆತ್ತಿ: ಶಿರ; ತರಹರಿಸು: ತಡಮಾಡು, ಕಳವಳಿಸು; ಸಂತವಿಸು: ಸಾಂತ್ವನಗೊಳಿಸು; ತಿವಿ: ಚುಚ್ಚು; ಮಲ್ಲ: ಜಟ್ಟಿ; ಮಾರುತಿ: ವಾಯುಪುತ್ರ (ಭೀಮ);

ಪದವಿಂಗಡಣೆ:
ಅರರೆ +ಸಿಕ್ಕಿದ +ವಲಲ +ಹೋ+ಹೋ
ಅರರೆ+ ಸೋತನು +ಮಲ್ಲನೆಂಬ್
ಅಬ್ಬರವು +ಮಸಗಿರೆ+ ಭೀಮ +ಕೇಳಿದನ್+ಅಧಿಕ+ ರೋಷದಲಿ
ತಿರುಗಿ +ಪೈಸರದಿಂದ +ಮಲ್ಲನನ್
ಒರಸಿದನು +ಮುಷ್ಟಿಯಲಿ +ನೆತ್ತಿಯ
ತರಹರಿಸೆ+ ಸಂತವಿಸಿ+ ತಿವಿದನು+ ಮಲ್ಲ+ ಮಾರುತಿಯ

ಅಚ್ಚರಿ:
(೧) ಅರೆರೆ – ೧, ೨ ಸಾಲಿನ ಮೊದಲ ಪದ

ನಿಮ್ಮ ಟಿಪ್ಪಣಿ ಬರೆಯಿರಿ