ಪದ್ಯ ೪೮: ಭೀಮನನೆದುರು ಮಲ್ಲಯುದ್ಧಕ್ಕೆ ಮುಂದೆ ಯಾರು ಬಂದರು?

ಖತಿಯೊಳುರಿನೆಗೆದೆದ್ದು ಪಿಂಗಳ
ನತಿಶಯದ ಕುಶಲದಲಿ ವರಬಃಉ
ಪತಿಯೆ ಇತ್ತೈಸೆನುತ ಹೊಕ್ಕನು ತೋಳ ತೆಕ್ಕೆಯಲಿ
ಧೃತಿಗೆಡದೆ ಹೋರಿದರು ಸಾಧಕ
ದತಿಶಯದ ಬಲುಹಿನಲಿ ವರಭೂ
ಪತಿಯೆ ಗೋಚರವಲ್ಲ ಭೀಮನ ಬಲವ ಬಣ್ಣಿವೊಡೆ (ವಿರಾಟ ಪರ್ವ, ೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸಿಂಧುರ, ಗಜಸಿಂಗನ ಸಾವಿನಿಂದ ಅತೀವ ಕೋಪಗೊಂಡು, ಕೋಪಜ್ವಾಲೆ ಮೇಲೇಳಲು, ಪಿಂಗಳನೆಂಬ ಮಲ್ಲನು ಮೇಲೆದ್ದು ನೆಗೆದನು. ರಾಜ ನೋಡು ಎಂದು ಭೀಮನೊಡನೆ ಯುದ್ಧವನ್ನಾರಂಭಿಸಿದನು. ತಾವು ಮಾಡಿದ ಸಾಧನೆಯ ಸತ್ವದಿಂದ ತೋಳ ಬಲುಹಿನಿಂದ ಇಬ್ಬರೂ ಸೆಣಸಿದರು. ಜನಮೇಜಯ ರಾಜ ಭೀಮನ ಬಲವನ್ನು ನಾನು ಹೇಗೆ ವರ್ಣಿಸಲಿ.

ಅರ್ಥ:
ಖತಿ: ರೇಗುವಿಕೆ, ಕೋಪ; ಉರಿ: ಬೆಂಕಿ; ನೆಗೆ: ಜಿಗಿ; ಎದ್ದು: ಮೇಲೇಳು; ಅತಿಶಯ: ಹೆಚ್ಚು, ಅಧಿಕ; ಕುಶಲ: ಕೌಶಲ್ಯ, ಚಾತುರ್ಯ; ವರ: ಶ್ರೇಷ್ಠ; ಭೂಪತಿ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಹೊಕ್ಕು: ಸೇರು ತೋಳು: ಭುಜ; ತೆಕ್ಕೆ: ಅಪ್ಪುಗೆ, ಆಲಿಂಗನ; ಧೃತಿ: ಧೈರ್ಯ; ಹೋರು: ಜಗಳ, ಕಲಹ; ಸಾಧಕ: ಪರಿಶ್ರಮ; ಬಲುಹು: ಶಕ್ತಿ; ಗೋಚರ: ಕಾಣು; ಬಲ: ಶಕ್ತಿ; ಬಣ್ಣಿಸು: ವರ್ಣಿಸು;

ಪದವಿಂಗಡಣೆ:
ಖತಿಯೊಳ್+ಉರಿ+ನೆಗೆದ್+ಎದ್ದು +ಪಿಂಗಳನ್
ಅತಿಶಯದ +ಕುಶಲದಲಿ+ ವರಭೂ
ಪತಿಯೆ +ಚಿತ್ತೈಸೆನುತ +ಹೊಕ್ಕನು +ತೋಳ +ತೆಕ್ಕೆಯಲಿ
ಧೃತಿಗೆಡದೆ +ಹೋರಿದರು +ಸಾಧಕದ್
ಅತಿಶಯದ+ ಬಲುಹಿನಲಿ+ ವರಭೂ
ಪತಿಯೆ +ಗೋಚರವಲ್ಲ+ ಭೀಮನ +ಬಲವ +ಬಣ್ಣಿವೊಡೆ

ಅಚ್ಚರಿ:
(೧) ೨, ೫ ಸಾಲು ಸಾಮ್ಯವಾಗಿರುವ ಪರಿ – ಅತಿಶಯ, ವರಭೂಪತಿ ಪದಗಳು
(೨) ಜೋಡಿ ಪದಗಳು – ತೋಳ ತೆಕ್ಕೆಯಲಿ, ಭೀಮನ ಬಲವ ಬಣ್ಣಿವೊಡೆ

ನಿಮ್ಮ ಟಿಪ್ಪಣಿ ಬರೆಯಿರಿ