ಪದ್ಯ ೪೫: ಸಿಂಧುರನು ಭೀಮನಿಗೆ ಏನು ಹೇಳಿದ?

ಎಲವೊ ಬಾಣಸಿ ಎನ್ನೊಡನೆ ಹೆ
ಕ್ಕಳಿಸಿ ಸಮರವ ತೊಡಕಿದರೆ ನಿ
ಟ್ಟೆಲುವ ಮುರಿವೆನುಯೆನುತ ಸಿಂಧುರ ಗಾಢಗರ್ವದಲಿ
ಹಳಚಿದನು ಖತಿಯೇರೆ ಬಾಹ
ಪ್ಪಳಿಸಿ ತಿವಿಯಲು ಭೀಮ ನಗುತದ
ಕಳುಕದಿರೆ ಭೀತಿಯಲಿ ಸಿಂಧುರ ಹೊಕ್ಕನುರವಣಿಸಿ (ವಿರಾಟ ಪರ್ವ, ೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲವೋ ಅಡುಗೆಯವ, ನನ್ನೊಡನೆ ಯುದ್ಧಕ್ಕೆ ಬಂದರೆ ನಿನ್ನೆಲ್ಲ ಮೂಳೆಗಳನ್ನು ಮುರಿಯುತ್ತೇನೆ, ಎನ್ನುತ್ತಾ ಸಿಂಧುರನು ಮಹಾಗರ್ವದಿಂದ ತೋಳುತಟ್ಟಿ ಭೀಮನನ್ನು ತಿವಿದನು. ಭೀಮನು ನಕ್ಕು ಅಲುಗಾಡದಿರಲು, ಸಿಂಧುರನು ಬೆದರಿ ಮತ್ತೆ ಆಕ್ರಮಣ ಮಾಡಿದನು.

ಅರ್ಥ:
ಬಾಣಸಿ: ಅಡುಗೆಯವ; ಹೆಕ್ಕಳ: ಹೆಚ್ಚಳ, ಅತಿಶಯ; ಸಮರ: ಯುದ್ಧ; ತೊಡಕು: ಸಿಕ್ಕು, ಗೋಜು, ಗೊಂದಲ; ನಿಟ್ಟೆಲುವು: ನೇರವಾದ ಮೂಲೆ; ಮುರಿ: ಚೂರುಮಾಡು; ಗಾಢ: ದೃಢವಾದ; ಗರ್ವ: ಅಹಂಕಾರ; ಹಳಚು: ತಾಗು, ಬಡಿ; ಖತಿ: ದುಃಖ, ಅಳಲು; ಬಾಹು: ತೋಳು; ಅಪ್ಪಲಿಸು: ತಾಗು; ತಿವಿ: ಚುಚ್ಚು; ನಗುತ: ಹರ್ಷಿಸುತ್ತ; ಅಳುಕು: ಹೆದರು; ಭೀತಿ: ಭಯ; ಹೊಕ್ಕು: ಸೇರು; ಉರವಣಿಸು: ಉತ್ಸಾಹದಿಂದಿರು, ಆತುರಿಸು;

ಪದವಿಂಗಡಣೆ:
ಎಲವೊ +ಬಾಣಸಿ +ಎನ್ನೊಡನೆ +ಹೆ
ಕ್ಕಳಿಸಿ +ಸಮರವ +ತೊಡಕಿದರೆ +ನಿ
ಟ್ಟೆಲುವ +ಮುರಿವೆನು+ಎನುತ +ಸಿಂಧುರ +ಗಾಢ+ಗರ್ವದಲಿ
ಹಳಚಿದನು +ಖತಿ+ಏರೆ +ಬಾಹ
ಪ್ಪಳಿಸಿ+ ತಿವಿಯಲು +ಭೀಮ +ನಗುತ್+ಅದಕ್
ಅಳುಕದಿರೆ +ಭೀತಿಯಲಿ +ಸಿಂಧುರ +ಹೊಕ್ಕನ್+ಉರವಣಿಸಿ

ಅಚ್ಚರಿ:
(೧) ಭೀಮನ ಶಕ್ತಿ – ಹಳಚಿದನು ಖತಿಯೇರೆ ಬಾಹಪ್ಪಳಿಸಿ ತಿವಿಯಲು ಭೀಮ ನಗುತದಕಳುಕದಿರೆ

ನಿಮ್ಮ ಟಿಪ್ಪಣಿ ಬರೆಯಿರಿ