ಹೊಡೆದು ಭುಜವನು ಹುಂಕರಿಸಿ ಕಿಡಿ
ಯಿಡುವ ಮೀಸೆಯ ತಿದ್ದುತೊಲವಿನ
ಲಡಿಗಡಿಗೆಯಾರ್ಭಟಿಸಿ ನಿಂದನು ಮಲ್ಲ ಜೀಮೂತ
ನುಡಿ ನೃಪತಿ ಹದನೇನು ರಿಪುಗಳ
ಮಡುಹಿ ಬರಲೋ ಮೇಣು ಕೈಸೆರೆ
ವಿಡಿದು ತರ್ಲೋ ಏನು ಹದನೆಲೆ ನೃಪತಿ ಹೇಳೆಂದ (ವಿರಾಟ ಪರ್ವ, ೪ ಸಂಧಿ, ೮ ಪದ್ಯ)
ತಾತ್ಪರ್ಯ:
ಮಲ್ಲರ ಮುಖಂಡನಾದ ಜೀಮೂತನು ತನ್ನ ತೋಳನ್ನು ತಟ್ಟಿ, ಹೂಂಕರಿಸಿ ಕಿಡಿಯಿಡುವ ಮೀಸೆಗಳನ್ನು ತಿದ್ದಿ, ಹೆಜ್ಜೆ ಹೆಜ್ಜೆಗೂ ಆರ್ಭಟಿಸಿ ಕೌರವನಿಗೆ ವಂದಿಸಿ ಪ್ರಭು ಏನಪ್ಪಣೆ, ಶತ್ರುಗಳನ್ನು ಸಂಹರಿಸಿ ಬರಲೋ ಅಥವ ಬಂಧಿಸಿ ತರಲೋ ಏನಪ್ಪಣೆ ಎಂದು ಕೇಳಿದನು.
ಅರ್ಥ:
ಹೊಡೆ: ಏಟು, ಹೊಡೆತ; ಭುಜ: ಬಾಹು; ಹೂಕರಿಸು: ಹೂಂಕಾರ; ಕಿಡಿ: ಬೆಂಕಿ; ತಿದ್ದು: ಸರಿಮಾಡು; ಒಲವು: ಪ್ರೀತಿ; ಅಡಿಗಡಿಗೆ: ಮತ್ತೆ ಮತ್ತೆ; ಆರ್ಭಟಿಸು: ಗರ್ಜಿಸು; ನಿಂದನು: ನಿಲ್ಲು; ಮಲ್ಲ: ಜಟ್ಟಿ; ನುಡಿ: ಮಾತು; ನೃಪತಿ: ರಾಜ; ಹದ: ಸ್ಥಿತಿ; ರಿಪು: ವೈರಿ; ಮಡುಹು: ಕೊಲ್ಲು, ಸಾಯಿಸು; ಮೇಣು: ಅಥವ; ಕೈಸೆರೆ: ಬಂಧಿಸು; ತರು: ಬರೆಮಾಡು;
ಪದವಿಂಗಡಣೆ:
ಹೊಡೆದು +ಭುಜವನು +ಹುಂಕರಿಸಿ+ ಕಿಡಿ
ಯಿಡುವ +ಮೀಸೆಯ +ತಿದ್ದುತ್+ಒಲವಿನಲ್
ಅಡಿಗಡಿಗೆ+ಆರ್ಭಟಿಸಿ+ ನಿಂದನು +ಮಲ್ಲ +ಜೀಮೂತ
ನುಡಿ +ನೃಪತಿ +ಹದನೇನು+ ರಿಪುಗಳ
ಮಡುಹಿ+ ಬರಲೋ+ ಮೇಣು+ ಕೈಸೆರೆ
ವಿಡಿದು +ತರಲೋ+ ಏನು+ ಹದನೆಲೆ+ ನೃಪತಿ+ ಹೇಳೆಂದ
ಅಚ್ಚರಿ:
(೧) ಬರಲೋ, ತರಲೋ – ಪ್ರಾಸ ಪದ