ಪದ್ಯ ೧೦೪: ಜನರು ಯಾವ ರೀತಿ ಮಾತನಾಡುತ್ತಿದ್ದರು?

ಈಕೆಗೋಸುಗವಳಿದನಕಟವಿ
ವೇಕಿ ಕೀಚಕನೆಂದು ಕೆಲಬರಿ
ದೇಕೆ ನಮಗೀ ಚಿಂತೆ ಶಿವ ಶಿವಯೆಂದು ಕೆಲಕೆಲರು
ನೂಕಿ ಕವಿದುದು ಮಂದಿ ಮಧ್ಯದೊ
ಳೀಕೆ ಮೆಲ್ಲನೆ ಬರುತಲಾ ಲೋ
ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ (ವಿರಾಟ ಪರ್ವ, ೩ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಅವಿವೇಕಿಯಾದ ಕೀಚಕನು ಇವಳಿಗಾಗಿ ಸತ್ತ ಎಂದು ಕೆಲವರೆಂದರು. ನಮಗೇಕಿದ್ದೀತು ಇದರ ಚಿಂತೆ ಶಿವ ಶಿವಾ ಎಂದು ಕೆಲವರೆಂದರು. ಕುತೂಹಲದಿಂದ ಜನರು ಬೀದಿಯ ಇಕ್ಕೆಲದಲ್ಲೂ ನಿಂತು ನೋಡುತ್ತಿರಲು ದ್ರೌಪದಿಯು ನಿಧಾನವಾಗಿ ನಡೆಯುತ್ತಾ ಬಂದು ಬಾಣಸಿನ ಮನೆಯ ಬಾಗಿಲಲ್ಲಿ ಲೋಕೈಕವೀರನಾದ ಭೀಮನನ್ನು ನೋಡಿದಳು.

ಅರ್ಥ:
ಅಳಿ: ನಾಶ, ಸಾವು; ಅಕಟ: ಅಯ್ಯೋ; ಅವಿವೇಕಿ: ವಿವೇಚನೆ ಇಲ್ಲದೆ; ಕೆಲಬರು: ಸ್ವಲ್ಪ ಜನ; ಚಿಂತೆ: ಕಳವಳ, ಯೋಚನೆ; ನೂಕು: ತಳ್ಳು; ಕವಿದು: ಆವರಿಸು; ಮಂದಿ: ಜನ; ಮಧ್ಯ: ನಡುವೆ; ಮೆಲ್ಲನೆ: ನಿಧಾನ; ಬರುತ: ಆಗಮನ; ಲೋಕ: ಜಗತ್ತು; ವೀರ: ಶೂರ; ಬಾಣಸಿಗ: ಅಡುಗೆ; ಬಾಗಿಲು: ಕದನ;

ಪದವಿಂಗಡಣೆ:
ಈಕೆಗೋಸುಗವ್+ಅಳಿದನ್+ಅಕಟ+ಅವಿ
ವೇಕಿ +ಕೀಚಕನೆಂದು+ ಕೆಲಬರ್
ಇದೇಕೆ +ನಮಗೀ +ಚಿಂತೆ +ಶಿವ +ಶಿವಯೆಂದು +ಕೆಲಕೆಲರು
ನೂಕಿ +ಕವಿದುದು +ಮಂದಿ +ಮಧ್ಯದೊಳ್
ಈಕೆ +ಮೆಲ್ಲನೆ +ಬರುತಲಾ +ಲೋ
ಕೈಕ +ವೀರನ +ಕಂಡಳಾ +ಬಾಣಸಿನ +ಬಾಗಿಲಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಲೋಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ

ನಿಮ್ಮ ಟಿಪ್ಪಣಿ ಬರೆಯಿರಿ