ಅಳಲು ಕೈಮಿಗಲಾ ವಿರಾಟನ
ಲಲನೆ ಸೈರಂಧ್ರಿಯನು ಕರೆಸಿದ
ಳೆಲೆ ಮಹಾತುಮೆ ತಾಯೆ ನಿಮಗಂಜುವೆವು ಶರಣೆನುತ
ಹೊಳಲೊಳಿದ್ದರೆ ಭೀತಿ ಘನ ನೀ
ವೊಲಿದ ಠಾವಿಗೆ ಬಿಜಯ ಮಾಡುವು
ದುಳುಹ ಬೇಹುದು ತಮ್ಮನೆನಲಿಂತೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೧೦೭ ಪದ್ಯ)
ತಾತ್ಪರ್ಯ:
ಅರಮನೆಯಲ್ಲಿ ದುಃಖವು ಹೆಚ್ಚಾಗುತ್ತಿರಲು, ಸುದೇಷ್ಣೆಯು ಸೈರಂಧ್ರಿಯನ್ನು ಕರೆಸಿ, ಎಲೆ ತಾಯೆ ನೀನು ಮಹಾತ್ಮೆ, ನಿನಗೆ ನಾವು ಹೆದರುತ್ತೇವೆ, ಇದೋ ನಮ್ಮ ನಮಸ್ಕಾರ, ಈ ಪಣ್ಣಣದಲ್ಲಿದ್ದರೆ ಭೀತಿ ಹೆಚ್ಚು, ನಿನಗೆ ಬೇಕಾದ ಜಾಗಕ್ಕೆ ದಯಮಾಡಿಸು, ನಮ್ಮನ್ನುಳಿಸು ಎಂದು ಹೇಳಲು ದ್ರೌಪದಿಯು ಹೀಗೆಂದಳು…
ಅರ್ಥ:
ಅಳು: ದುಃಖಿಸು, ಗೋಳಿದು; ಕೈಮಿಗಲು: ಹೆಚ್ಚಾಗು, ಕೈಮೀರು; ಲಲನೆ: ಹೆಣ್ಣು; ಕರೆಸು: ಬರೆಮಾದು; ಮಹಾತುಮೆ: ಮಹಾತ್ಮೆ, ಶ್ರೇಷ್ಠ; ತಾಯೆ: ಮಾತೆ; ಅಂಜು: ಹೆದರು; ಶರಣು: ಆಶ್ರಯ; ಹೊಳಲು: ಪ್ರಕಾಶ, ಮರುದನಿ; ಭೀತಿ: ಭಯ; ಘನ: ಶ್ರೇಷ್ಠ; ಒಲಿ: ಒಪ್ಪು, ಸಮ್ಮತಿಸು, ಬಯಸು; ಠಾವು: ಜಾಗ; ಬಿಜಯ: ತೆರಳುವಿಕೆ; ಉಳುಹು: ಕಾಪಾಡು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ)
ಪದವಿಂಗಡಣೆ:
ಅಳಲು+ ಕೈಮಿಗಲ್+ಆ+ ವಿರಾಟನ
ಲಲನೆ+ ಸೈರಂಧ್ರಿಯನು +ಕರೆಸಿದಳ್
ಎಲೆ +ಮಹಾತುಮೆ+ ತಾಯೆ+ ನಿಮಗ್+ಅಂಜುವೆವು +ಶರಣೆನುತ
ಹೊಳಲೊಳ್+ಇದ್ದರೆ +ಭೀತಿ +ಘನ+ ನೀ
ವೊಲಿದ+ ಠಾವಿಗೆ+ ಬಿಜಯ+ ಮಾಡುವುದ್
ಉಳುಹ +ಬೇಹುದು +ತಮ್ಮನ್+ಎನಲ್+ಇಂತೆಂದಳ್+ಇಂದುಮುಖಿ
ಅಚ್ಚರಿ:
(೧) ಸೈರಂಧ್ರಿಯನ್ನು ವಿರಾಟನ ಲಲನೆ ಎಂದು ಕರೆದಿರುವುದು
(೨) ದ್ರೌಪದಿಯನ್ನು ಕರೆದ ಪರಿ – ಮಹಾತುಮೆ, ತಾಯೆ, ಇಂದುಮುಖಿ