ಪದ್ಯ ೯೮: ದ್ರೌಪದಿಯನ್ನು ಕೀಚಕನ ತಮ್ಮಂದಿರು ಎಲ್ಲಿಗೆ ಕಟ್ಟಿದರು?

ತೆಗೆದು ಮಂಚದಲವನ ಹೆಣನನು
ಬಿಗಿದರವಳನು ಕಾಲದೆಸೆಯಲಿ
ನಗುವುದಿನ್ನೊಮ್ಮೆನುತ ಕಟ್ಟಿದರವರು ಕಾಮಿನಿಯ
ಬೆಗಡುಗೊಂಡಂಭೋಜಮುಖಿಯು
ಬ್ಬೆಗದೊಳೊದರಿದಳಕಟಕಟ ಪಾ
ಪಿಗಳಿರಾ ಗಂಧರ್ವರಿರ ಹಾಯೆನುತ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೯೮ ಪದ್ಯ)

ತಾತ್ಪರ್ಯ:
ಕೀಚಕನ ಹೆಣವನ್ನು ಚಟ್ಟದಲ್ಲಿ ಕಟ್ಟಿ ಇನ್ನೊಮ್ಮೆ ನಗು ಎಂದು ಆಕೆಯನ್ನು ಅವನ ಪಾದದಬಳಿ ಕಟ್ಟಿದರು. ದ್ರೌಪದಿಯು ಆಶ್ಚರ್ಯಗೊಂಡು ಉದ್ವೇಗದಿಂದ ಅಯ್ಯೋ ಪಾಪಿಗಳಿರಾ ಓ ಗಂಧರ್ವರೇ ಎಂದು ದುಃಖಭರಿತಳಾಗಿ ಕೂಗಿದಳು.

ಅರ್ಥ:
ತೆಗೆ: ಹೊರತರು; ಮಂಚ: ಪಲ್ಲಂಗ; ಹೆಣ: ಮೃತ ದೇಹ; ಬಿಗಿ: ಬಂಧಿಸು; ಕಾಲು: ಪಾದ; ನಗು: ಸಂತಸ; ಕಟ್ಟು: ಬಂಧಿಸು; ಕಾಮಿನಿ: ಹೆನ್ಣು; ಬೆಗಡು: ಆಶ್ಚರ್ಯ, ಬೆರಗು; ಅಂಭೋಜಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ಉಬ್ಬೆಗ: ದುಃಖ, ಚಿಂತೆ; ಒದರು: ಕೊಡಹು, ಜಾಡಿಸು; ಅಕಟ: ಅಯ್ಯೋ; ಪಾಪಿ: ದುಷ್ಟ; ಹಲುಬು: ದುಃಖಿಸು;

ಪದವಿಂಗಡಣೆ:
ತೆಗೆದು +ಮಂಚದಲ್+ಅವನ +ಹೆಣನನು
ಬಿಗಿದರ್+ಅವಳನು +ಕಾಲದೆಸೆಯಲಿ
ನಗುವುದ್+ಇನ್ನೊಮ್ಮೆನುತ +ಕಟ್ಟಿದರ್+ಅವರು +ಕಾಮಿನಿಯ
ಬೆಗಡುಗೊಂಡ್+ಅಂಭೋಜಮುಖಿ
ಉಬ್ಬೆಗದೊಳ್+ಒದರಿದಳ್+ಅಕಟಕಟ+ ಪಾ
ಪಿಗಳಿರಾ+ ಗಂಧರ್ವರಿರ+ ಹಾಯೆನುತ +ಹಲುಬಿದಳು

ಅಚ್ಚರಿ:
(೧) ದ್ರೌಪದಿಯನ್ನು ಕರೆದ ಪರಿ – ಅಂಭೋಜಮುಖಿ, ಕಾಮಿನಿ

ನಿಮ್ಮ ಟಿಪ್ಪಣಿ ಬರೆಯಿರಿ