ಪದ್ಯ ೬೫: ದ್ರೌಪದಿಯು ಕೊನೆಯದಾಗಿ ಏನು ಹೇಳಿದಳು?

ಭೀಮ ಕೊಟ್ಟೆ ತನಗೆ ಸಾವಿನ
ನೇಮವನು ನಿಮ್ಮಣ್ಣನಾಜ್ಞೆ ವಿ
ರಾಮವಾಗದೆ ಬದುಕೆ ಧರ್ಮದ ಮೈಸಿರಿಯನರಿದು
ಕಾಮಿನಿಯ ಕೇಳಿಯಲಿ ನೆನೆವುದು
ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವುದೆಂದೆರಗಿದಳು ಚರಣದಲಿ (ವಿರಾಟ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಭೀಮಸೇನ, ನಿಮ್ಮಣ್ಣನ ಆಜ್ಞೆ ಆಭಾಧಿತವಾಗಿ ನಡೆಯಲು, ಧರ್ಮದ ಮಹಿಮೆಯನ್ನು ಧರ್ಮ ಸೂಕ್ಷ್ಮವನ್ನು ಚೆನ್ನಾಗಿ ಪರಿಶೀಲಿಸಿ, ಸಾಯಲು ನನಗೆ ಅಪ್ಪಣೆ ಕೊಟ್ಟಿರುವೆ, ಆದರೊಂದು ಪ್ರಾರ್ಥನೆ, ಹೆಣ್ಣಿನೊಂದಿನ ವಿನೋದ ಕ್ರೀಡೆಯಲ್ಲಿ ನನ್ನನ್ನು ನೆನೆಸಿಕೋ, ಕೋಪದ ಅಂಧಕಾರದಿಂದ ಮಿತಿಮೀರಿ ನಾನಾಡಿದ ಮಾತನ್ನು ಕ್ಷಮಿಸು, ಎನ್ನುತ್ತಾ ದ್ರೌಪದಿಯು ಭೀಮನ ಪಾದಗಳ ಮೇಲೆ ಬಿದ್ದಳು.

ಅರ್ಥ:
ಕೊಟ್ಟೆ: ನೀಡು; ಸಾವು: ಮರಣ; ನೇಮ: ನಿಯಮ; ಆಜ್ಞೆ: ಅನುಮತಿ, ಕಟ್ಟಳೆ; ವಿರಾಮ: ಬಿಡುವು, ವಿಶ್ರಾಂತಿ; ಬದುಕು: ಜೀವಿಸು; ಧರ್ಮ: ನಿಯಮ, ಧಾರಣ ಮಾಡಿದುದು; ಮೈಸಿರಿ: ದೇಹ ಸೌಂದರ್ಯ; ಅರಿ: ತಿಳಿ; ಕಾಮಿನಿ: ಹೆಣ್ಣು; ಕೇಳಿ: ವಿನೋದ, ಕ್ರೀಡೆ; ನೆನೆ: ಜ್ಞಾಪಿಸು; ತಾಮಸ: ಕತ್ತಲೆ, ಅಂಧಕಾರ; ಮೀರು: ಉಲ್ಲಂಘಿಸು; ನುಡಿ: ಮಾತು; ಉದ್ದಾಮ: ಶ್ರೇಷ್ಠವಾದ; ಸೈರಿಸು: ತಾಳು, ಸಹಿಸು; ಎರಗು: ನಮಸ್ಕರಿಸು; ಚರಣ: ಪಾದ;

ಪದವಿಂಗಡಣೆ:
ಭೀಮ +ಕೊಟ್ಟೆ +ತನಗೆ +ಸಾವಿನ
ನೇಮವನು +ನಿಮ್ಮಣ್ಣನಾಜ್ಞೆ +ವಿ
ರಾಮವಾಗದೆ+ ಬದುಕೆ+ ಧರ್ಮದ +ಮೈಸಿರಿಯನರಿದು
ಕಾಮಿನಿಯ +ಕೇಳಿಯಲಿ +ನೆನೆವುದು
ತಾಮಸದಿ+ ತಾ +ಮೀರಿ +ನುಡಿದ್
ಉದ್ದಾಮತೆಯ +ಸೈರಿಸುವುದೆಂದ್+ಎರಗಿದಳು +ಚರಣದಲಿ

ಅಚ್ಚರಿ:
(೧) ದ್ರೌಪದಿಯ ನೋವಿನ ನುಡಿ – ಕಾಮಿನಿಯ ಕೇಳಿಯಲಿ ನೆನೆವುದು ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವುದು

ನಿಮ್ಮ ಟಿಪ್ಪಣಿ ಬರೆಯಿರಿ