ಪದ್ಯ ೬೪: ದ್ರೌಪದಿ ಪಾಂಡವರಿಗೇಕೆ ಅಂಜದಿರಲು ನಿರ್ಧರಿಸಿದಳು?

ಆವ ಭಾಗ್ಯಾಧಿಕನೊ ಕೌರವ
ದೇವನರಸುಗಳೊಡೆಯತನದಲಿ
ನೀವು ಕೃಷ್ಣನ ಕೂರ್ಮೆಯಲಿ ಧರ್ಮಹಿರಿದಲಿ ಸಿಲುಕಿ
ನೀವು ತಟತಟವಾಗಿ ಲೋಗರ
ಸೇವೆಯಲಿ ಬೆಂದೊಡಲ ಹೊರೆವಿರಿ
ಸಾವವಳು ನಿಮಗಂಜಲೇಕಿನ್ನೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಸಮಸ್ತ ಭರತ ಖಂಡದ ರಾಜರಿಗೆ ಚಕ್ರವರ್ತಿಯಾಗಿರುವ ಕೌರವನು ಎಂತಹ ಮಹಾಪುಣ್ಯಶಾಲಿ! ನೀವಾದರೋ ಕೃಷ್ಣನ ಪ್ರೀತಿಗೆ ಪಾತ್ರರಾಗಿ ಧರ್ಮದಲ್ಲಿ ಸಿಕ್ಕಿ ಬಿದ್ದಿದ್ದೀರಿ, ಆದುದರಿಂದ ನೀವು ಪರರ ಸೇವೆಯಲ್ಲಿ ಒಂದೇ ಸಮನೆ ಬೆಂದು ದೇಹದಲ್ಲಿ ಇನ್ನೂ ಇದ್ದೀರಿ, ಹೇಗಿದ್ದರೂ ಸಾಯುವ ನಾನು ನಿಅಮ್ಗೆ ಇನ್ನೇಕೆ ಅಂಜಬೇಕು ಎಂದು ದ್ರೌಪದಿಯು ಉದ್ಗರಿಸಿದಳು.

ಅರ್ಥ:
ಭಾಗ್ಯ: ಅದೃಷ್ಟ, ಸುದೈವ; ಅಧಿಕ: ಹೆಚ್ಚು; ಕೌರವದೇವ: ದುರ್ಯೋಧನ; ಅರಸು: ರಾಜ; ಒಡೆಯ: ನಾಯಕ; ಕೂರ್ಮೆ: ಪ್ರೀತಿ, ನಲ್ಮೆ; ಧರ್ಮ: ನಿಯಮ; ಸಿಲುಕು: ಬಂಧನ; ತಟತಟ: ಒಂದೇ ಸಮನೆ; ಲೋಗರ: ಜನರ; ಸೇವೆ: ಉಪಚಾರ; ಬೆಂದು: ಸಂಕಟಕ್ಕೊಳಗಾಗು; ಒಡಲು: ದೇಹ; ಹೊರೆ: ಭಾರ; ಸಾವು: ಮರಣ; ಅಂಜು: ಹೆದರು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಆವ +ಭಾಗ್ಯ+ಅಧಿಕನೊ+ ಕೌರವ
ದೇವನ್+ಅರಸುಗಳ್+ಒಡೆಯತನದಲಿ
ನೀವು +ಕೃಷ್ಣನ+ ಕೂರ್ಮೆಯಲಿ+ ಧರ್ಮದಲಿ +ಸಿಲುಕಿಹಿರಿ
ನೀವು +ತಟತಟವಾಗಿ+ ಲೋಗರ
ಸೇವೆಯಲಿ +ಬೆಂದ್+ಒಡಲ +ಹೊರೆವಿರಿ
ಸಾವವಳು +ನಿಮಗ್+ಅಂಜಲೇಕಿನ್ನ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಪಾಂಡವರ ಸ್ಥಿತಿ – ನೀವು ಕೃಷ್ಣನ ಕೂರ್ಮೆಯಲಿ ಧರ್ಮಹಿರಿದಲಿ ಸಿಲುಕಿ

ನಿಮ್ಮ ಟಿಪ್ಪಣಿ ಬರೆಯಿರಿ