ಪದ್ಯ ೬೨: ಪಾಂಡವರನ್ನು ದ್ರೌಪದಿ ಹೇಗೆ ಬಯ್ದಳು?

ಕಾಲಯಮ ಕೆರಳಿದರೆ ಮುರಿವೆ
ಚ್ಚಾಳುತನದವರೆನ್ನನೊಬ್ಬಳೆ
ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ
ತೋಳ ಹೊರೆ ನಿಮಗೇಕೆ ಭೂಮೀ
ಪಾಲವಂಶದೊಳುದಿಸಲೇತಕೆ
ಕೂಳುಗೇಡಿಂಗೊಡಲ ಹೊರುವಿರಿಯೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ಪ್ರಳಯಕಾಲದ ಯಮನೇ ಕೆರಳಿ ಎದುರು ಯುದ್ಧಕ್ಕೆ ಬಂದರೂ ಅವನನ್ನು ಸೋಲಿಸುವಷ್ಟು ಸಾಮರ್ಥ್ಯವಿರುವ ನೀವು, ನನ್ನೊಬ್ಬಳನ್ನು ಆಳಲಾರಿರಿ, ಪಾಪಿಗಳಿರಾ, ನೀವು ಅಪಕೀರ್ತಿಗೂ ಹೆದರುವವರಲ್ಲ, ನಿಮಗೆ ಇಂತಹ ಸದೃಢ ತೋಳುಗಳೇಕೆ, ಕ್ಷತ್ರಿಯರಾಗಿ ಏಕೆ ಹುಟ್ಟಿದಿರಿ, ನಿಮಗೆ ಕೂಳುಹಾಕುವುದೊಂದು ಕೇಡು ಎಂದು ದ್ರೌಪದಿಯು ಪಾಂಡವರನ್ನು ನಿಂದಿಸಿದಳು.

ಅರ್ಥ:
ಕಾಲ: ಸಮಯ; ಕಾಲಯಮ: ಪ್ರಳಯಕಾಲದ ಯಮ; ಯಮ: ಮೃತ್ಯುದೇವತೆ; ಕೆರಳು: ರೇಗು; ಮುರಿ: ಸೀಳು; ಎಚ್ಚು: ಸವರು, ಬಾಣಬಿಡು; ಆಳು: ಅಧಿಕಾರ ನಡೆಸು; ಪಾಪಿ: ದುಷ್ಟ; ಅಪಕೀರ್ತಿ: ಅಪಯಶಸ್ಸು; ಅಳುಕು: ಹೆಅರು; ತೋಳು: ಬಾಹು; ಹೊರೆ: ಭಾರ; ಭೂಮೀಪಾಲ: ರಾಜ; ವಂಶ: ಕುಲ; ಉದಿಸು: ಹುಟ್ಟು; ಕೂಳು: ಊಟ; ಒಡಲು: ದೇಹ; ಹೊರು: ಹೇರು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಕಾಲಯಮ+ ಕೆರಳಿದರೆ +ಮುರಿವ್
ಎಚ್ಚಾಳುತನದವರ್+ಎನ್ನನೊಬ್ಬಳೆನ್
ಆಳಲಾರಿರಿ+ ಪಾಪಿಗಳಿರ್+ಅಪಕೀರ್ತಿರ್+ಅಳುಕಿರಲ
ತೋಳ +ಹೊರೆ +ನಿಮಗೇಕೆ +ಭೂಮೀ
ಪಾಲ+ವಂಶದೊಳ್+ಉದಿಸಲೇತಕೆ
ಕೂಳುಗೇಡಿಂಗ್+ಒಡಲ+ ಹೊರುವಿರಿ+ಎಂದಳ್+ಇಂದುಮುಖಿ

ಅಚ್ಚರಿ:
(೧) ಬಯ್ಯುವ ಪರಿ – ಪಾಪಿಗಳಿರಪಕೀರ್ತಿಗಳುಕಿರಲ, ಭೂಮೀಪಾಲವಂಶದೊಳುದಿಸಲೇತಕೆ ಕೂಳುಗೇಡಿಂಗೊಡಲ ಹೊರುವಿರಿ

ನಿಮ್ಮ ಟಿಪ್ಪಣಿ ಬರೆಯಿರಿ