ಪದ್ಯ ೫೯: ದ್ರೌಪದಿ ಏಕೆ ಬಸವಳಿದಳು?

ಮಂದೆಗೆಳಸಿದ ಪಾಪಿ ಕೌರವ
ನಂದು ಮುಂದಲೆವಿಡಿದ ಸೈಂಧವ
ಬಂದು ಬಳಿಕಾರಣ್ಯವಾಸದೊಳೆನ್ನನೆಳೆದೊಯ್ದ
ಇಂದು ಕೀಚಕನಾಯ ಕಾಲಲಿ
ನೊಂದೆ ನಾನಿದು ಮೂರು ಬಾರಿಯ
ಬಂದ ಭಂಗವೆ ಸಾಕೆನುತ ಬಸವಳಿದಳಬುಜಾಕ್ಷಿ (ವಿರಾಟ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಎಲ್ಲರ ಸಮೂಹದಲ್ಲಿ ಪಾಪಿ ದುರ್ಯೋಧನನು ನನ್ನ ಮಾನ ಕಳೆಯಲು ಅಂದು ನನ್ನ ತಲೆಯ ಮುಂಭಾಗವನ್ನು ಹಿಡಿದು ಎಳೆದನು. ಅರಣ್ಯವಾಸದಲ್ಲಿದ್ದಾಗ ಸೈಂಧವನು ನನ್ನನ್ನು ಹೊತ್ತುಕೊಂಡು ಹೋದನು, ಈ ದಿನ ಕೀಚಕನು ನನ್ನನ್ನು ಕಾಲಿನಿಂದ ಒದೆದನು. ಈ ಮೂರು ಭಂಗಗಳೇ ಸಾಕು ಎಂದು ಅತೀವ ದುಃಖಭರಿತಳಾಗಿ ದ್ರೌಪದಿಯು ಬಳಲಿದಳು.

ಅರ್ಥ:
ಮಂದೆ: ಗುಂಪು, ಸಮೂಹ; ಎಳಸು: ಸೆಳೆ; ಪಾಪಿ: ದುಷ್ಟ; ಮುಂದಲೆ: ತಲೆಯ ಮುಂಭಾಗ; ಬಂದು: ಆಗಮಿಸು; ಬಳಿಕ: ನಂತರ; ಅರಣ್ಯ: ಕಾಡು; ನಾಯ: ಶ್ವಾನ; ಕಾಲು: ಪಾದ; ನೊಂದೆ: ನೋವುಂಡೆ; ಭಂಗ: ಕಷ್ಟ, ಅವಮಾನ; ಸಾಕು: ನಿಲ್ಲಿಸು; ಬಸವಳಿ: ಬಳಲಿಕೆ, ಆಯಾಸ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಮಂದೆಗ್+ಎಳಸಿದ +ಪಾಪಿ +ಕೌರವನ್
ಅಂದು +ಮುಂದಲೆವಿಡಿದ+ ಸೈಂಧವ
ಬಂದು +ಬಳಿಕ+ಅರಣ್ಯ+ವಾಸದೊಳ್+ಎನ್ನನ್+ಎಳೆದೊಯ್ದ
ಇಂದು +ಕೀಚಕ+ನಾಯ +ಕಾಲಲಿ
ನೊಂದೆ +ನಾನ್+ಇದು +ಮೂರು +ಬಾರಿಯ
ಬಂದ +ಭಂಗವೆ+ ಸಾಕೆನುತ+ ಬಸವಳಿದಳ್+ಅಬುಜಾಕ್ಷಿ

ಅಚ್ಚರಿ:
(೧) ಭಂಗವನ್ನೆಸೆದವರು – ಕೌರವ, ಸೈಂಧವ, ಕೀಚಕ
(೨) ಬ ಕಾರದ ಪದಗಳು – ಬಾರಿಯ ಬಂದ ಭಂಗವೆ

ನಿಮ್ಮ ಟಿಪ್ಪಣಿ ಬರೆಯಿರಿ