ಪದ್ಯ ೫೦: ಭೀಮನ ಅಸಹಾಯಕತೆಯೇನು?

ಅಂದು ದುಶ್ಯಾಸನನ ಕರುಳನು
ತಿಂದಡಲ್ಲದೆ ತಣಿವು ದೊರೆಕೊಳ
ದೆಂದು ಹಾಯ್ದೊಡೆ ಹಲುಗಿರಿದು ಮಾಣಿಸಿದ ಯಮಸೂನು
ಇಂದು ಕೀಚಕನಾಯನೆರಗುವೆ
ನೆಂದು ಮರನನು ನೋದಿದರೆ ಬೇ
ಡೆಂದ ಹದನನು ಕಂಡೆ ನೀನೆನಗುಂಟೆಯಪರಾಧ (ವಿರಾಟ ಪರ್ವ, ೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅಂದು ವಸ್ತ್ರಾಪಹರಣದ ಸಮಯದಲ್ಲಿ ದುಶ್ಯಾಸನನ ಕರುಳನ್ನು ಕಿತ್ತು ತಿನ್ನದ ಹೊರತು ತೃಪ್ತಿದೊರಕುವುದಿಲ್ಲವೆಂದು ನುಗ್ಗಿದರೆ ಅಣ್ಣನು ಹಲ್ಲು ಕಿರಿದು ತಪ್ಪಿಸಿದ. ಈ ದಿನ ಸಭೆಯಲ್ಲಿ ಕೀಚಕ ನಾಯಿಯನ್ನು ಬಡಿಯಬೇಕೆಂದು ಮರವನ್ನು ನೋಡಿದರೆ ಅಣ್ಣನು ಬೇಡವೆಂದುದನ್ನು ನೀನೇ ಕಂಡಿರುವೆ. ಹೀರಿಗುವಾಗ ನನ್ನಲ್ಲೇನು ತಪ್ಪಿದೆ ನೀನೇ ಹೇಳು ಎಂದು ಭೀಮನು ನೊಂದು ನುಡಿದನು.

ಅರ್ಥ:
ಅಂದು: ಹಿಂದೆ; ಕರುಳು: ಪಚನಾಂಗ; ತಿಂದು: ಉಣ್ಣು; ತಣಿವು: ತೃಪ್ತಿ, ಸಮಾಧಾನ; ದೊರಕು: ಪಡೆ; ಹಾಯ್ದು: ಹೊಡೆ; ಹಾಯಿ: ಮೇಲೆಬೀಳು; ಹಲುಗಿರಿ: ನಗು; ಮಾಣು: ತಪ್ಪಿಸು, ನಿಲ್ಲಿಸು; ನಾಯಿ: ಕುನ್ನಿ; ಎರಗು: ಬೀಳಿಸು; ಮರ: ತರು; ನೋಡು: ವೀಕ್ಷಿಸು; ಬೇಡ: ತ್ಯಜಿಸು; ಹದ: ರೀತಿ; ಕಂಡು: ನೋಡು; ಅಪರಾಧ: ತಪ್ಪು;

ಪದವಿಂಗಡಣೆ:
ಅಂದು +ದುಶ್ಯಾಸನನ +ಕರುಳನು
ತಿಂದಡಲ್ಲದೆ +ತಣಿವು +ದೊರೆಕೊಳ
ದೆಂದು +ಹಾಯ್ದೊಡೆ +ಹಲುಗಿರಿದು+ ಮಾಣಿಸಿದ +ಯಮಸೂನು
ಇಂದು+ ಕೀಚಕ+ನಾಯನ್+ಎರಗುವೆನ್
ಎಂದು +ಮರನನು+ ನೋದಿದರೆ+ ಬೇ
ಡೆಂದ +ಹದನನು +ಕಂಡೆ +ನೀನ್+ಎನಗುಂಟೆ+ಅಪರಾಧ

ಅಚ್ಚರಿ:
(೧) ಅಂದು, ಇಂದು, ಎಂದು – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ