ನಿನ್ನೆ ಹಗಲರೆತಟ್ಟಿ ಕೀಚಕ
ಕುನ್ನಿಯೊದೆದನು ರಾಜಸಭೆಯಲಿ
ನಿನ್ನವಂದಿಗರಿರಲು ಪರಿಭವವುಚಿತವೇ ತನಗೆ
ಎನ್ನನವ ಬೆಂಬಳಿಯಬಿಡನಾ
ನಿನ್ನು ಬದುಕುವಳಲ್ಲ ಪಾತಕ
ನಿನ್ನ ತಾಗದೆ ಮಾಣದೆನಲಾ ಭೀಮ ಖತಿಗೊಂಡ (ವಿರಾಟ ಪರ್ವ, ೩ ಸಂಧಿ, ೪೨ ಪದ್ಯ)
ತಾತ್ಪರ್ಯ:
ಹಿಂದಿನ ದಿನ ಕೀಚಕನೆಂಬ ನಾಯಿಯು ರಾಜಸಭೆಯ ಎದುರಿನಲ್ಲಿ ನನ್ನನ್ನು ನೂಕಿ ಕಾಲಿನಲ್ಲಿ ಹೊಸಗಿ ಹೊಡೆದುದನ್ನು ನೀನೇ ನೋಡಿದೆ, ನಿನ್ನಂತಹವನಿರುವಾಗ ನನಗೆ ಈ ಅಪಮಾನ ಸರಿಯೇ? ಅವನು ನನ್ನ ಬೆನ್ನು ಹತ್ತದೆ ಬಿಡುವುದಿಲ್ಲ, ನಾನು ಬದುಕುವವಳಲ್ಲ ನಾನು ಸತ್ತರೆ ಆ ಪಾಪ ನಿನಗೆ ತಟ್ಟದೆ ಬಿಡುವುದಿಲ್ಲ ಎಂದು ದ್ರೌಪದಿಯು ಹೇಳಿದಳು.
ಅರ್ಥ:
ಹಗಲು: ದಿನ; ಅರೆಯಟ್ಟು: ಹಿಂದಕ್ಕಟ್ಟು, ಬೆನ್ನಟ್ಟು; ಕುನ್ನಿ: ನಾಯಿ; ಒದೆ: ಕಾಲಲ್ಲಿ ನೂಕು; ರಾಜಸಭೆ: ದರ್ಬಾರು; ಪರಿಭವ: ಅನಾದಾರ, ತಿರಸ್ಕಾರ; ಉಚಿತ: ಸರಿಯೇ; ಬೆಂಬಳಿ: ಹಿಂದೆ ಬೀಳು; ಬದುಕು: ಜೀವಿಸು; ಪಾತಕ: ಪಾಪಿ; ತಾಗು: ಮುಟ್ಟು; ಮಾಣು: ನಿಲ್ಲು; ಖತಿ: ಕೋಪ; ಆನು: ನಾನು;
ಪದವಿಂಗಡಣೆ:
ನಿನ್ನೆ +ಹಗಲ್+ಅರೆತಟ್ಟಿ+ ಕೀಚಕ
ಕುನ್ನಿ+ಒದೆದನು +ರಾಜಸಭೆಯಲಿ
ನಿನ್ನವಂದಿಗರ್+ಇರಲು +ಪರಿಭವ+ಉಚಿತವೇ +ತನಗೆ
ಎನ್ನನ್+ಅವ+ ಬೆಂಬಳಿಯಬಿಡನ್
ಆನಿನ್ನು +ಬದುಕುವಳಲ್ಲ+ ಪಾತಕ
ನಿನ್ನ+ ತಾಗದೆ +ಮಾಣದೆನಲ್+ಆ+ ಭೀಮ +ಖತಿಗೊಂಡ
ಅಚ್ಚರಿ:
(೧) ದ್ರೌಪದಿಯು ಭೀಮನನ್ನು ಹೆದರಿಸುವ ಪರಿ – ಪಾತಕ ನಿನ್ನ ತಾಗದೆ ಮಾಣದು
(೨) ದ್ರೌಪದಿಯು ಭೀಮನನ್ನು ಹೊಗಳುವ ಪರಿ – ನಿನ್ನವಂದಿಗರಿರಲು ಪರಿಭವವುಚಿತವೇ ತನಗೆ