ಎಂದು ಬೀಳ್ಕೊಂಡಬಲೆ ತನ್ನಯ
ಮಂದಿರಕೆ ಬಂದೊಳಗೊಳಗೆ ಮನ
ನೊಂದು ಸೈವೆರಗಾಗಿ ಚಿಂತಿಸಿ ನೂಕಿದಳು ಹಗಲ
ಕೊಂದು ಕೊಂಬೊಡೆ ಆತ್ಮಘಾತಕ
ಹಿಂದೆ ಹತ್ತದೆ ಮಾಣದೇಗುವೆ
ನೆಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು (ವಿರಾಟ ಪರ್ವ, ೩ ಸಂಧಿ, ೩೧ ಪದ್ಯ)
ತಾತ್ಪರ್ಯ:
ಹೀಗೆ ಹೇಳಿ ದ್ರೌಪದಿಯು ತನ್ನ ಮನೆಗೆ ಬಂದು ಮನಸ್ಸಿನಲ್ಲಿಯೇ ಅತಿಶಯವಾಗಿ ನೊಂದು, ಬಹಳ ತಳಮಳಗೊಂಡು ಚಿಂತಿಸಿದಳು. ಆತ್ಮಹತ್ಯೆ ಮಾಡಿಕೊಳ್ಳೋಣವೆಂದರೆ ಪಾಪ ಬರುವುದು ತಪ್ಪಿದ್ದಲ್ಲ, ಏನು ಮಾಡಲಿ ಎಂದು ಬಹಳ ನೊಂದಳು.
ಅರ್ಥ:
ಬೀಳ್ಕೊಂಡು: ತೆರಳು; ಮಂದಿರ: ಆಲಯ; ಬಂದು: ಆಗಮಿಸು; ಮನ: ಮನಸ್ಸು; ನೊಂದು: ನೋವು, ದುಃಖ; ಸೈವೆರಗು: ಅತಿಯಾದ ತಳಮಳ; ಚಿಂತಿಸು: ಯೋಚಿಸು; ನೂಕು: ತಳ್ಳು; ಹಗಲು: ದಿನ; ಕೊಂದು: ಸಾಯಿಸು; ಆತ್ಮ: ಜೀವ; ಘಾತ: ಆಪತ್ತು, ಕೊಲೆ; ಹಿಂದೆ: ಅನಂತರ; ಹತ್ತು: ಮೇಲೇರು; ಮಾಣು: ತಡಮಾಡು; ಏಗು: ಸಾಗಿಸು, ನಿಭಾಯಿಸು; ಮನ: ಮನಸ್ಸು; ಹಿರಿ:ಚೆದುರು; ಮರುಗು: ತಳಮಳ, ಸಂಕಟ;
ಪದವಿಂಗಡಣೆ:
ಎಂದು +ಬೀಳ್ಕೊಂಡ್+ಅಬಲೆ +ತನ್ನಯ
ಮಂದಿರಕೆ +ಬಂದ್+ಒಳಗೊಳಗೆ +ಮನ
ನೊಂದು +ಸೈವೆರಗಾಗಿ+ ಚಿಂತಿಸಿ+ ನೂಕಿದಳು +ಹಗಲ
ಕೊಂದು +ಕೊಂಬೊಡೆ +ಆತ್ಮಘಾತಕ
ಹಿಂದೆ +ಹತ್ತದೆ +ಮಾಣದ್+ಏಗುವೆನ್
ಎಂದು +ದ್ರೌಪದಿ +ತನ್ನ +ಮನದಲಿ+ ಹಿರಿದು +ಮರುಗಿದಳು
ಅಚ್ಚರಿ:
(೧) ಆತ್ಮಹತ್ಯೆ ಏಕೆ ಮಾಡಿಕೊಳ್ಳಬಾರದು – ಕೊಂದು ಕೊಂಬೊಡೆ ಆತ್ಮಘಾತಕ