ದುರುಳ ನಿಮ್ಮೊಡಹುಟ್ಟಿದನು ನೀ
ವರಸುಗಳು ತಿರುಕುಳಿಗಳಾವಿ
ನ್ನಿರಲುಬಾರದು ನೃಪತಿ ತಪ್ಪಿದೊಡಾರು ಕಾಯುವರು
ಕರೆಸಿ ಬುದ್ಧಿಯ ಹೇಳಿಯೆನ್ನನು
ಹೊರೆಯಲಾಪರೆ ಹೊರೆಯಿರಲ್ಲದೊ
ಡರಸಿ ಕಳುಹುವುದೆನಲು ಬಳಿಕಿಂತೆಂದಳಾ ರಾಣಿ (ವಿರಾಟ ಪರ್ವ, ೩ ಸಂಧಿ, ೨೯ ಪದ್ಯ)
ತಾತ್ಪರ್ಯ:
ನಿಮ್ಮ ತಮ್ಮನು ದುಷ್ಟ, ನೀವು ರಾಜರು, ನಾನು ನಿಮ್ಮಾಶ್ರಯದಲ್ಲಿರುವ ತಿರುಪೆ ಬೇಡುವವಳು, ರಾಜರೇ ತಪ್ಪಿದ ಮೇಲೆ ಇನ್ನು ಕಾಯುವವರಾರು? ನಿಮ್ಮ ತಮ್ಮನನ್ನು ಕರೆಸಿ ಸರಿಯಾಗಿ ಬುದ್ಧಿ ಹೇಳಿ, ನಮ್ಮನ್ನು ಕಾಪಾಡುವಉದಾದರೆ ಇಟ್ಟುಕೊಳ್ಳಿ, ಇಲ್ಲದಿದ್ದರೆ ರಾಣಿ, ನಮ್ಮನ್ನು ಎಲ್ಲಿಗಾದರೂ ಕಳುಹಿಸಿಬಿಡಿ ಎಂದು ಸೈರಂಧ್ರಿಯು ಸುದೇಷ್ಣೆಗೆ ಹೇಳಿದಳು.
ಅರ್ಥ:
ದುರುಳ: ದುಷ್ಟ; ಒಡಹುಟ್ಟು: ಜೊತೆಯಲ್ಲಿ ಹುಟ್ಟಿದ; ಅರಸು: ರಾಜ; ತಿರುಕ:ಭಿಕ್ಷುಕ, ಯಾಚಕ; ನೃಪತಿ: ರಾಜ; ತಪ್ಪು: ಸರಿಯಲ್ಲದ; ಕಾಯು: ರಕ್ಷಿಸು; ಕರೆಸು: ಬರೆಮಾಡು; ಬುದ್ಧಿ: ತಿಳುವಳಿಕೆ; ಹೇಳು: ತಿಳಿಸು; ಹೊರೆ: ರಕ್ಷಣೆ, ಆಶ್ರಯ; ಅರಸಿ: ಹುಡುಕಿ; ಕಳುಹು: ಕಳುಹಿಸು, ತೆರಳು; ಬಳಿಕ: ನಂತರ; ರಾಣಿ: ಅರಸಿ;
ಪದವಿಂಗಡಣೆ:
ದುರುಳ +ನಿಮ್ಮ್+ಒಡಹುಟ್ಟಿದನು +ನೀವ್
ಅರಸುಗಳು +ತಿರುಕುಳಿಗಳ್+ಆವ್
ಇನ್ನಿರಲುಬಾರದು+ ನೃಪತಿ+ ತಪ್ಪಿದೊಡ್+ಆರು +ಕಾಯುವರು
ಕರೆಸಿ+ ಬುದ್ಧಿಯ +ಹೇಳಿ+ಎನ್ನನು
ಹೊರೆಯಲಾಪರೆ+ ಹೊರೆಯಿರಲ್ಲದೊಡ್
ಅರಸಿ +ಕಳುಹುವುದ್+ಎನಲು +ಬಳಿಕಿಂತೆಂದಳಾ +ರಾಣಿ
ಅಚ್ಚರಿ:
(೧) ಹೊರೆ ಪದದ ಬಳಕೆ – ಹೊರೆಯಲಾಪರೆ ಹೊರೆಯಿರಲ್ಲದೊಡ್