ಪದ್ಯ ೪: ದ್ರೌಪದಿಯು ಯಾರನ್ನು ನೆನೆದಳು?

ಹರಿ ಹರಿ ಶ್ರೀಕಾಂತ ದಾನವ
ಹರ ಮುಕುಂದ ಮುರಾರಿ ಗತಿ ಶೂ
ನ್ಯರಿಗೆ ನೀನೇ ಗತಿಯಲಾ ಗರುವಾಯಿಗೆಟ್ಟೆನಲೈ
ಕುರುಕುಲಾಗ್ರಣಿ ಸೆಳೆದ ವಸ್ತ್ರಾ
ಕರುಷಣದ ಭಯ ಮತ್ತೆ ಬಂದಿದೆ
ಕರುಣಿ ನೀನೇ ಬಲ್ಲೆಯೆನುತಡಿಯಿಟ್ಟಳಬುಜಾಕ್ಷಿ (ವಿರಾಟ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ದ್ರೌಪದಿಯು ಹರಿ, ಹರಿ, ಶ್ರೀಕೃಷ್ಣ, ರಾಕ್ಷಸಾಂತಕ, ಮುಕುಂದ, ಮುರಾರಿ, ಗತಿಯಿಲ್ಲದವರಿಗೆ ನೀನೇ ಗರಿ, ನನ್ನ ಮಾನ ಕೆಡುವ ಹೊತ್ತು ಮತ್ತೆ ಬಂದಿದೆ, ಕೌರವನು ವಸ್ತ್ರಾಪಹರಣ ಮಾಡುವಾಗ ಬಂದ ಗತಿ ಈಗ ಮತ್ತೆ ಬಂದಿದೆ, ಸ್ವಾಮಿ ಕರುಣಾಸಾಗರ್ನೇ, ಇದೇನೆಂದು ನೀನೇ ಬಲ್ಲೆ, ಎಂದು ಮನಸ್ಸಿನಲ್ಲೇ ಕಳವಳಗೊಂಡು ಹೆಜ್ಜೆಯಿಟ್ಟಳು.

ಅರ್ಥ:
ಹರಿ: ವಿಷ್ಣು; ಕಾಂತ: ಪ್ರಿಯತಮ; ದಾನವ: ರಾಕ್ಷಸ, ದುಷ್ಟ; ಹರ: ಸಂಹರಿಸುವ; ಗತಿ: ಸ್ಥಿತಿ, ಅವಸ್ಥೆ; ಶೂನ್ಯ: ಏನು ಇಲ್ಲದ; ಗರುವ: ಶ್ರೇಷ್ಠ; ಕುಲ: ವಂಶ; ಅಗ್ರಣಿ: ಮೊದಲಿಗ; ಸೆಳೆ: ಜಗ್ಗು, ಎಳೆ; ವಸ್ತ್ರ: ಬಟ್ಟೆ; ಕರುಷ: ಆಕರ್ಷಕ; ಭಯ: ಅಂಜಿಕೆ; ಬಂದಿದೆ: ಆಗಮಿಸಿದೆ; ಕರುಣೆ: ದಯೆ; ಬಲ್ಲೆ: ತಿಳಿದಿರುವೆ; ಅಡಿಯಿಡು: ಹೆಜ್ಜೆಯಿಡು, ಚಲಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಹರಿ +ಹರಿ +ಶ್ರೀಕಾಂತ +ದಾನವ
ಹರ+ ಮುಕುಂದ +ಮುರಾರಿ+ ಗತಿ +ಶೂ
ನ್ಯರಿಗೆ +ನೀನೇ +ಗತಿಯಲಾ +ಗರುವಾಯಿಗೆಟ್ಟೆನಲೈ
ಕುರುಕುಲಾಗ್ರಣಿ +ಸೆಳೆದ +ವಸ್ತ್ರಾ
ಕರುಷಣದ +ಭಯ +ಮತ್ತೆ +ಬಂದಿದೆ
ಕರುಣಿ +ನೀನೇ +ಬಲ್ಲೆ+ಎನುತ್+ಅಡಿಯಿಟ್ಟಳ್+ಅಬುಜಾಕ್ಷಿ

ಅಚ್ಚರಿ:
(೧) ಕೃಷ್ಣನನ್ನು ಹೊಗಳುವ ಪರಿ – ಗತಿ ಶೂನ್ಯರಿಗೆ ನೀನೇ ಗತಿಯಲಾ

ನಿಮ್ಮ ಟಿಪ್ಪಣಿ ಬರೆಯಿರಿ