ಪದ್ಯ ೫೪: ಕಾಮನ ತಾಪವು ಕೀಚಕನನ್ನು ಹೇಗೆ ಆವರಿಸಿತ್ತು?

ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳುಕುಗಳಮಳಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯೊಲಾದುದು ಬಲಿದ ಚಂದ್ರಿಕೆ
ಬೆರಸಿ ಕರಗಿದ ತವರವಾಯಿತು ಕೀಚಕನ ಮನಕೆ (ವಿರಾಟ ಪರ್ವ, ೨ ಸಂಧಿ, ೫೪ ಪದ್ಯ)

ತಾತ್ಪರ್ಯ:
ತಣ್ಣಗಿರಲೆಂದು ಹಾಕಿಕೊಂಡು ವೀಳೆಯದ ಕರ್ಪೂರದ ಹಳುಕುಗಳು ಉರಿಯನ್ನೇ ತಂದವು. ಸುಗಂಧಪೂರಿತವಾದ ಲೇಪನವನ್ನು ಮೈಗೆ ಹಚ್ಚಿದರೆ ಅದು ಸುಟ್ಟು ಕರುಕಲಾಯಿತು. ನೀರಿನ ಪೊಟ್ಟಣವನ್ನು ಕಟ್ಟಿ ಮೈ ಮೇಲೆ ಆಡಿಸಿದರೆ ಉರಿಯಾಯಿತು. ಬಲಿತ ಬೆಳುದಿಂಗಳು ಕರಗಿದ ತವರದಂತೆ ಮೈಸುಟ್ಟಿತು.

ಅರ್ಥ:
ಉರಿ: ತಾಪ; ಒಡಲು: ದೇಹ; ವೀಳೆ: ತಾಂಬೂಲ; ಕರ್ಪುರ: ಸುಗಂಧ ದ್ರವ್ಯ; ಹಳು: ತಗ್ಗಿದುದು; ಅಮಳ: ನಿರ್ಮಲ; ಗಂಧ: ಸುಗಂಧ; ಸರಸ: ಚೆಲ್ಲಾಟ, ವಿನೋದ; ಕರ್ದಮ: ಸುಗಂಧವನ್ನು ಬೆರೆಸಿದ ನೀರು; ಪೂಸು: ಬಳಿಯುವಿಕೆ, ಲೇಪನ; ಅಂಗ: ದೇಹ; ಹೊರಳು: ತಿರುವು, ಬಾಗು; ನೀರು: ಜಲ; ಪೊಟ್ಟಣ: ದೊನ್ನೆ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಬಲಿದ: ಹೆಚ್ಚಾದ; ಚಂದ್ರಿಕೆ: ಬೆಳದಿಂಗಳು; ಬೆರಸು: ಜೊತೆಗೂಡು; ಕರಗು: ಕಡಿಮೆಯಾಗು; ತವರ: ಒಂದು ಬಗೆಯ ಲೋಹ; ಮನ: ಮನಸ್ಸು;

ಪದವಿಂಗಡಣೆ:
ಉರಿದುದ್+ಒಡಲೊಳು +ವೀಳೆಯದ +ಕ
ರ್ಪುರದ +ಹಳುಕುಗಳ್+ಅಮಳ+ಗಂಧದ
ಸರಸ+ ಕರ್ದಮ +ಕರಿಕುವರಿದುದು+ ಪೂಸಿದಂಗದಲಿ
ಹೊರಳೆ +ನೀರಿನ +ಪೊಟ್ಟಣವು +ದ
ಳ್ಳುರಿಯೊಲಾದುದು +ಬಲಿದ +ಚಂದ್ರಿಕೆ
ಬೆರಸಿ+ ಕರಗಿದ+ ತವರವಾಯಿತು +ಕೀಚಕನ+ ಮನಕೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹೊರಳೆ ನೀರಿನ ಪೊಟ್ಟಣವು ದಳ್ಳುರಿಯೊಲಾದುದು, ಬಲಿದ ಚಂದ್ರಿಕೆ ಬೆರಸಿ ಕರಗಿದ ತವರವಾಯಿತು

ನಿಮ್ಮ ಟಿಪ್ಪಣಿ ಬರೆಯಿರಿ