ಪದ್ಯ ೪೦: ಕೀಚಕನು ಯಾರನ್ನು ಕಾಣಲು ಹೊರಟನು?

ಹೂಣೆ ಹೊಕ್ಕುದು ವಿರಹದಾಶೆಯ
ಕಾಣೆನಾಕೆಯ ಮಾತಿನಲಿ ಮುಂ
ಗಾಣಿಕೆಯಲೇ ಸೂರೆಹೋದುದು ಮನದ ಸರ್ವಸ್ವ
ತ್ರಾಣ ಸಡಿಲಿತು ಬುದ್ಧಿ ಕದಡಿ ಕೃ
ಪಾಣಪಾಣಿ ವಿರಾಟರಾಯನ
ರಾಣಿಯರಮನೆಗೈದಿದನು ಕಂಡನು ನಿಜಾಗ್ರಜೆಯ (ವಿರಾಟ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೀಚಕನ ಮನಸ್ಸಿನಲ್ಲಿ ಹತಾಶೆ ಕಾಣಿಸಿತು, ಅವಳ ಮಾತಿನಲ್ಲಿ ಬಯಕೆಯ ಲಕ್ಷಣವೇ ಕಾಣಲಿಲ್ಲ. ಅವನ ಸರ್ವಸ್ವವೂ ಮೇಲುನೋಟಕ್ಕೆ ಸೂರೆಹೋಯಿತು. ಅವನ ಶಕ್ತಿ ಸಡಲಿತು, ಬುದ್ಧಿ ಕದಡಿತು, ಕೈಯಲ್ಲಿ ಕತ್ತಿಯನ್ನು ಹಿಡಿದಿದ್ದ ಕೀಚಕನು ಅರಮನೆಗೆ ಹೋಗಿ ತನ್ನ ಅಕ್ಕ ಸುದೇಷ್ಣೆಯನ್ನು ಕಂಡನು.

ಅರ್ಥ:
ಹೂಣೆ: ಸ್ಪರ್ಧೆ, ಪ್ರತಿಜ್ಞೆ; ಹೊಕ್ಕು: ಸೇರು; ವಿರಹ: ಅಗಲಿಕೆ, ವಿಯೋಗ; ಆಶೆ: ಇಚ್ಛೆ; ಕಾಣೆ: ತೋರು; ಮಾತು: ನುಡಿ; ಮುಂಗಾಣು: ಮುಂದೆ ತೋರು; ಸೂರೆ: ಸುಲಿಗೆ, ಕೊಳ್ಳೆ; ಮನ: ಮನಸ್ಸು; ಸರ್ವಸ್ವ: ಎಲ್ಲಾ; ತ್ರಾಣ: ಶಕ್ತಿ, ಬಲ; ಸಡಿಲು: ಜಾರು; ಬುದ್ಧಿ: ವಿವೇಕ; ಕದಡು: ಕಲಕು, ರಾಡಿ; ಕೃಪಾಣ: ಕತ್ತಿ; ಪಾಣಿ: ಹಸ್ತ; ರಾಯ: ರಾಜ; ರಾಣಿ: ಅರಸ; ಅರಮನೆ: ಆಲಯ; ಐದು: ಬಂದು ಸೇರು; ಕಂಡು: ನೋಡು; ಅಗ್ರಜೆ: ಅಕ್ಕ;

ಪದವಿಂಗಡಣೆ:
ಹೂಣೆ +ಹೊಕ್ಕುದು +ವಿರಹದ್+ಆಶೆಯ
ಕಾಣೆನ್+ಆಕೆಯ +ಮಾತಿನಲಿ+ ಮುಂ
ಗಾಣಿಕೆಯಲೇ +ಸೂರೆಹೋದುದು+ ಮನದ +ಸರ್ವಸ್ವ
ತ್ರಾಣ +ಸಡಿಲಿತು +ಬುದ್ಧಿ +ಕದಡಿ+ ಕೃ
ಪಾಣ+ಪಾಣಿ +ವಿರಾಟರಾಯನ
ರಾಣಿ+ಅರಮನೆಗ್+ಐದಿದನು+ ಕಂಡನು+ ನಿಜ+ಅಗ್ರಜೆಯ

ಅಚ್ಚರಿ:
(೧) ಕೀಚಕನನ್ನು ಕರೆದ ಪರಿ – ಕೃಪಾಣಪಾಣಿ
(೨) ಪಾಣಿ, ರಾಣಿ; ಪ್ರಾಣ, ತ್ರಾಣ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ