ಪದ್ಯ ೩೯: ದ್ರೌಪದಿಯು ಕೀಚಕನನ್ನು ಹೇಗೆ ಎಚ್ಚರಿಸಿದಳು?

ನ್ಯಾಯವನು ಮಿಗೆ ಗೆಲಿವುದೀಯ
ನ್ಯಾಯವಧಿಕವು ಧರ್ಮ ಪರರೇ
ಸ್ಥಾಯಿಗಳು ತಿಮಿರಕ್ಕೆ ಭಾಸ್ಕರಗಾವುದಂತರವು
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲವರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದಳಬುಜಾಕ್ಷಿ (ವಿರಾಟ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ನ್ಯಾಯವನ್ನೇ ಗೆಲ್ಲುವುದರಿಂದ ಅನ್ಯಾಯವೇ ಮಿಗಿಲಾದುದು! ಧರ್ಮಪರರೇ ಸ್ಥಿರವಾಗಿ ನಿಲ್ಲುತ್ತಾರೆ, ಕತ್ತಲೆ ಸೂರ್ಯರ ನಡುವಿನ ವ್ಯತ್ಯಾಸ ನಿನಗೂ ನನ್ನ ಪತಿಗಳಿಗೂ ಇದೆ. ಅವರು ನಿನ್ನನ್ನು ಉಳಿಸುವುದಿಲ್ಲ. ಅವರ ಕೈಗುಣವನ್ನು ಬಲ್ಲವರೇ ಬಲ್ಲರು, ಕೀಚಕ, ನಾಯಿಯು ಸಿಂಕಕ್ಕೆ ಇದಿರು ನಿಂತೀತೇ? ಸಾಕು ನಡೆ ಎಂದು ದ್ರೌಪದಿ ಹೇಳಿದಳು.

ಅರ್ಥ:
ನ್ಯಾಯ: ಯೋಗ್ಯವಾದುದು; ಮಿಗೆ: ಮತ್ತು, ಅಧಿಕವಾಗಿ; ಗೆಲುವು: ಜಯ; ಅನ್ಯಾಯ: ಸರಿಯಲ್ಲದ; ಅಧಿಕ: ಹೆಚ್ಚು; ಧರ್ಮ: ಧಾರಣೆ ಮಾಡಿದುದು ಪರರು: ಅನ್ಯರು; ಸ್ಥಾಯಿ: ಸ್ಥಿರವಾಗಿರುವುದು, ಕಾಯಂ; ತಿಮಿರ: ಅಂಧಕಾರ; ಭಾಸ್ಕರ: ರವಿ; ಅಂತರ: ದೂರ; ಕಾಯು: ರಕ್ಷಣೆ; ಕೈಗುಣ: ಲಕ್ಷಣ; ಆಯತ:ಉಚಿತವಾದ; ಬಲ್ಲ: ತಿಳಿದ; ನಾಯಿ: ಶ್ವಾನ, ಕುನ್ನಿ; ಸಿಂಹ: ಕೇಸರಿ; ಇದಿರು: ಎದುರು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಪದ; ಹೋಗು: ತೆರಳು; ಅಬುಜಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ನ್ಯಾಯವನು +ಮಿಗೆ +ಗೆಲಿವುದ್+ಈ+
ಅನ್ಯಾಯವ್+ಅಧಿಕವು+ ಧರ್ಮ +ಪರರೇ
ಸ್ಥಾಯಿಗಳು +ತಿಮಿರಕ್ಕೆ +ಭಾಸ್ಕರಗ್+ಆವುದ್+ಅಂತರವು
ಕಾಯರ್+ಎನ್ನವರ್+ಅವರ+ ಕೈಗುಣದ್
ಆಯತವ +ಬಲ್ಲವರೆ +ಬಲ್ಲರು
ನಾಯಿ+ ಸಿಂಹಕ್ಕಿದಿರೆ+ ಫಡ+ ಹೋಗೆಂದಳ್+ಅಬುಜಾಕ್ಷಿ

ಅಚ್ಚರಿ:
(೧) ಕೀಚಕನನ್ನು ಬಯ್ಯುವ ಪರಿ – ನಾಯಿ ಸಿಂಹಕ್ಕಿದಿರೆ, ತಿಮಿರಕ್ಕೆ ಭಾಸ್ಕರಗಾವುದಂತರವು
(೨) ಹಿತನುಡಿ – ಧರ್ಮ ಪರರೇ ಸ್ಥಾಯಿಗಳು

ನಿಮ್ಮ ಟಿಪ್ಪಣಿ ಬರೆಯಿರಿ