ಎಲೆ ದುರಾತ್ಮ ಮಹಾಪರಾಧವ
ಬಳಸುವರೆ ಬಯಲಿಂಗೆ ನಿನ್ನಯ
ಕುಲದ ಬೇರನು ಕೊಯ್ವರೇ ಫಲವಾವುದಿದರಿಂದ
ಹಳಿವು ಹೊದ್ದದೆ ಹೆತ್ತವರು ಮ
ಕ್ಕಳುಗಳೆಂಬೀ ಬದುಕು ಮಾಣದೆ
ಯೆಳಸಿಕೊಂಬಂತಾದುದೆಂದಳು ಪಾಂಡವರ ರಾಣಿ (ವಿರಾಟ ಪರ್ವ, ೨ ಸಂಧಿ, ೨೬ ಪದ್ಯ)
ತಾತ್ಪರ್ಯ:
ದ್ರೌಪದಿಯು ಎಲವೋ ದುರಾತ್ಮ, ವ್ಯರ್ಥವಾಗಿ ಮಹಾಪರಾಧಕ್ಕೆ ಮನಸ್ಸು ಮಾಡಿ, ನಿನ್ನ ಕುಲದ ಬೇರನ್ನೇ ಕೊಯ್ಯುವುದು ಸರಿಯೇ? ಇದರಿಂದ ನಿನಗೆ ಬರುವುದಾದರೂ ಏನು? ಅಪಕೀರ್ತಿ ಬರುವುದಿಲ್ಲವೇ, ಹೆತ್ತತಾಯಿ, ಮಕ್ಕಳು ಎಂದು ಗಣಿಸದೆ, ಅವರನ್ನು ಬಯಸಿದಂತೆ ಆಯಿತು ಎಂದಳು.
ಅರ್ಥ:
ದುರಾತ್ಮ: ದುಷ್ಟ; ಮಹಾಪರಾಧ: ದೊಡ್ಡ ತಪ್ಪು; ಬಳಸು: ಆವರಿಸುವಿಕೆ, ಸುತ್ತುವರಿ; ಬಯಲು: ಹೊರಾಂಗಣ; ಕುಲ: ವಂಶ; ಕೊಯ್ವು: ಸೀಳು; ಫಲ: ಪ್ರಯೋಜನ; ಹಳಿ: ದೂಷಿಸು, ನಿಂದಿಸು; ಹೊದ್ದು: ಪರಿಣಮಿಸು; ಹೆತ್ತು: ಹಡಿದು; ಮಕ್ಕಳು: ಕುಮಾರರು; ಬದುಕು: ಜೀವನ; ಮಾಣು:ನಿಲ್ಲಿಸು; ಎಳಸು: ಬಯಸು, ಅಪೇಕ್ಷಿಸು; ರಾಣಿ: ಅರಸಿ;
ಪದವಿಂಗಡಣೆ:
ಎಲೆ +ದುರಾತ್ಮ +ಮಹ+ಅಪರಾಧವ
ಬಳಸುವರೆ +ಬಯಲಿಂಗೆ +ನಿನ್ನಯ
ಕುಲದ +ಬೇರನು +ಕೊಯ್ವರೇ +ಫಲವಾವುದ್+ಇದರಿಂದ
ಹಳಿವು +ಹೊದ್ದದೆ+ ಹೆತ್ತವರು +ಮ
ಕ್ಕಳುಗಳೆಂಬೀ +ಬದುಕು+ ಮಾಣದೆ
ಎಳಸಿಕೊಂಬಂತ್+ಆದುದೆಂದಳು+ ಪಾಂಡವರ+ ರಾಣಿ
ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಳಿವು ಹೊದ್ದದೆ ಹೆತ್ತವರು