ಪದ್ಯ ೧೨: ಕೀಚಕನೇಕೆ ಗಲಿಬಿಲಿಗೊಂಡನು?

ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದುದು ಕರಣದಲಿ ಕಳವಳದ ಬೀಡಾಯ್ತು
ಮೀರಿಪೊಗುವಂಗಜನ ಶರದಲಿ
ದೋರುವೋಯಿತು ಹೃದಯ ಕಣ್ಣುರಿ
ಗಾರಿಯಿವಳಾರೆನುತ ಗಜಬಜಿಸಿದನು ನಿಮಿಷದಲಿ (ವಿರಾಟ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕೀಚಕನ ಹೃದಯವು ದ್ರೌಪದಿಯ ರೂಪಕ್ಕೆ ಸೂರೆಹೋಯಿತು; ಕಣ್ಣುಗಳು ಅವಳತ್ತ ನೆಟ್ಟು ಮೋಹಗೊಂಡವು, ಮನಸ್ಸಿನ ಧೈರ್ಯವು ಎತ್ತಲೋ ಹೋಗಿ ಬಿಟ್ಟಿತು, ಕಳವಳವು ಮನಸ್ಸಿನಲ್ಲಿ ಬೀಡುಬಿಟ್ಟಿತು, ಕಾಮನ ಬಾಣದ ಪ್ರವೇಶದಿಂದ ಹೃದಯದಲ್ಲಿ ಬಿರುಕುಬಿಟ್ಟಿತು, ತನ್ನ ರೂಪಿನಿಂದ ನನ್ನ ಕಣ್ಣುಗಳನ್ನು ಉರಿಸುವ ಇವಳಾರು ಯಾರು ಎಂದು ಚಡಪಡಿಸಿದನು.

ಅರ್ಥ:
ಸೂರೆ: ಕೊಳ್ಳೆ, ಲೂಟಿ; ಚಿತ್ತ: ಮನಸ್ಸು; ಕಂಗಳು: ನೋಟ; ಮಾರುವೋಗು: ಮೋಹಗೊಳ್ಳು; ಖಳ: ದುಷ್ಟ; ಧೈರ್ಯ: ಪರಾಕ್ರಮ; ತೂರು: ಹೊರಹಾಕು; ಪೋದು: ಹೋಗು; ಕರಣ: ಜ್ಞಾನೇಂದ್ರಿಯ; ಕಳವಳ: ಗೊಂದಲ; ಬೀಡು: ನೆಲೆ; ಮೀರು: ಉಲ್ಲಂಘಿಸು; ಅಂಗಜ: ಕಾಮ; ಶರ: ಬಾಣ; ಹೃದಯ: ಎದೆ; ಕಣ್ಣು: ನಯನ; ಉರಿ: ನೋಯಿಸು; ಗಜಬಜ: ಗಲಾಟೆ, ಕೋಲಾಹಲ; ನಿಮಿಷ: ಕಾಲದ ಪ್ರಮಾಣ; ತೋರು: ಕಾಣು;

ಪದವಿಂಗಡಣೆ:
ಸೂರೆವೋಯಿತು +ಚಿತ್ತ +ಕಂಗಳು
ಮಾರುವೋದವು+ ಖಳನ +ಧೈರ್ಯವು
ತೂರಿ +ಪೋದುದು +ಕರಣದಲಿ +ಕಳವಳದ +ಬೀಡಾಯ್ತು
ಮೀರಿ+ಪೊಗುವ್+ಅಂಗಜನ+ ಶರದಲಿ
ದೋರುವೋಯಿತು +ಹೃದಯ +ಕಣ್ಣುರಿಗ್
ಆರಿಯಿವಳ್+ಆರೆನುತ+ ಗಜಬಜಿಸಿದನು+ ನಿಮಿಷದಲಿ

ಅಚ್ಚರಿ:
(೧) ಕೀಚನಕ ಮನಸ್ಥಿತಿಯನ್ನು ವರ್ಣಿಸುವ ಪರಿ – ಸೂರೆವೋಯಿತು ಚಿತ್ತ; ಕಂಗಳು ಮಾರುವೋದವು; ಖಳನ ಧೈರ್ಯವು ತೂರಿ ಪೋದುದು; ಕರಣದಲಿ ಕಳವಳದ ಬೀಡಾಯ್ತು

ನಿಮ್ಮ ಟಿಪ್ಪಣಿ ಬರೆಯಿರಿ