ಪದ್ಯ ೧೯: ಧರ್ಮಜನು ವಿರಾಟ ರಾಜನಿಗೆ ಏನು ಹೇಳಿದ?

ಕೆಟ್ಟುದಿಂದ್ರಪ್ರಸ್ಥ ಪಾಂಡವ
ರುಟ್ಟುಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ಹಿಮಕರಕುಲದ ರಾಯರಿಗೆ
ಬಿಟ್ಟರೆಮ್ಮನು ಜಠರ ಭರಣಕೆ
ನೆಟ್ಟನಾಶ್ರಯವಿಲ್ಲದಿರೆ ಕಂ
ಗೆಟ್ಟು ಬಂದೆವು ಕಂಕನೆಂಬಭಿದಾನ ತನಗೆಂದ (ವಿರಾಟ
ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಹಾ ವೈಭವಯುತವಾದ ಇಂದ್ರಪ್ರಸ್ಥನಗರವು ಕೆಟ್ಟು ಹೋಯಿತು. ಲೋಕೈಕ ವೀರರಾದ ಪಾಂಡಾರು ನಾರುಮಡಿಯುಟ್ಟು ಊರುಬಿಟ್ಟರು. ಚಂದ್ರವಂಶದ ರಾಜರಿಗೆ ದಟ್ಟವಾದ ಅಡವಿಯು ಮನೆಯಾಯಿತು. ಊರು ಬಿಡುವ ಮೊದಲು ನಮ್ಮನ್ನು ಕರೆಸಿ ಎಲ್ಲಿಯಾದರೂ ಹೋಗಿ ಹೊಟ್ಟೆ ಹೊರೆದುಕೊಳ್ಳಿರಿ ಎಂದು ಹೇಳಬೇಕಾಯಿತು. ಆಶ್ರಯವೇ ಇಲ್ಲದವನಾಗಿ ವ್ಯೆಥೆಪಟ್ಟು ಇಲ್ಲಿಗೆ ಬಂದಿದ್ದೇನೆ. ನನ್ನ ಹೆಸರು ಕಂಕ ಎಂದು ಧರ್ಜಜನು ವಿರಾಟ ರಾಜನಿಗೆ ಹೇಳಿದನು.

ಅರ್ಥ:
ಕೆಟ್ಟು: ಹಾಳಾಗು; ಉಟ್ಟು: ತೊಡು; ನಾರು: ತೊಗಟೆ; ಸೀರೆ: ವಸ್ತ್ರ; ಅಡವಿ: ಕಾದು; ಮನೆ: ಆಲಯ; ಹಿಮಕರ: ಚಂದ್ರ; ಕುಲ: ವಂಶ; ರಾಯ: ರಾಜ; ಬಿಟ್ಟು: ತೊರೆ; ಜಠರ: ಹೊಟ್ಟೆ; ಭರಣ: ಕಾಪಾಡು, ಪೋಷಿಸು; ಆಶ್ರಯ: ಆಸರೆ; ಕಂಗೆಟ್ಟು: ವ್ಯಥೆಗೊಳ್ಳು; ಬಂದು: ಆಗಮಿಸು; ಅಭಿಧಾನ: ಹೆಸರು;

ಪದವಿಂಗಡಣೆ:
ಕೆಟ್ಟುದ್+ಇಂದ್ರಪ್ರಸ್ಥ +ಪಾಂಡವರ್
ಉಟ್ಟು+ಹೋದರು +ನಾರ +ಸೀರೆಯನ್
ಅಟ್ಟಡವಿ+ ಮನೆಯಾಯ್ತು +ಹಿಮಕರ+ಕುಲದ +ರಾಯರಿಗೆ
ಬಿಟ್ಟರ್+ಎಮ್ಮನು +ಜಠರ+ ಭರಣಕೆ
ನೆಟ್ಟನ್+ಆಶ್ರಯವಿಲ್ಲದಿರೆ+ ಕಂ
ಗೆಟ್ಟು +ಬಂದೆವು +ಕಂಕನೆಂಬ್+ಅಭಿದಾನ+ ತನಗೆಂದ

ಅಚ್ಚರಿ:
(೧) ಪಾಂಡವರ ಸ್ಥಿತಿಯನ್ನು ವಿವರಿಸುವ ಪರಿ – ಪಾಂಡವರುಟ್ಟುಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ಹಿಮಕರಕುಲದ ರಾಯರಿಗೆ

ನಿಮ್ಮ ಟಿಪ್ಪಣಿ ಬರೆಯಿರಿ