ಸುರಪನರಸಿಯ ಶಾಪದಲಿ ಸಿತ
ತುರಗನರೆವೆಣ್ಣಾಗಿ ಮತ್ಸ್ಯೇ
ಶ್ವರನ ಮಗಳಿಗೆ ನಾಟ್ಯ ವಿದ್ಯಾಭ್ಯಾಸ ಸಂಗದಲಿ
ಇರಲು ಯಮಳರು ತುರಗ ಗೋವ್ರಜ
ಭರಣರಾದರು ಬಳಿಕ ಪಾಂಡವ
ರರಸಿ ಸಾರಿದಳೊಲವಿನಲಿ ವೈರಾಟ ಪಟ್ಟಣವ (ವಿರಾಟ ಪರ್ವ, ೧ ಸಂಧಿ, ೨೩ ಪದ್ಯ)
ತಾತ್ಪರ್ಯ:
ಇಂದ್ರನ ಅರಮನೆಯಲ್ಲಿದ್ದ ಅಮರಕನ್ಯೆ ಊರ್ವಶಿಯ ಶಾಪದಿಂದ ಅರ್ಜುನನು ನಪುಂಸಕನಾಗಿ ವಿರಾಟನ ಮಗಳಿಗೆ ನಾಟ್ಯವನ್ನು ಕಲಿಸುವವನಾದನು. ನಕುಲ ಸಹದೇವರು ಕುದುರೆಗಳ, ಗೋವುಗಳ ಪಾಲಕರಾದರು. ಬಳಿಕ ದ್ರೌಪದಿಯು ವಿರಾಟನಗರವನ್ನು ಪ್ರವೇಶಿಸಿದಳು.
ಅರ್ಥ:
ಸುರಪ: ಇಂದ್ರ; ಅರಸಿ: ರಾಣಿ; ಶಾಪ: ನಿಷ್ಠುರದ ನುಡಿ; ಸಿತತುರಗ: ಬಿಳಿ ಕುದುರೆ; ಅರೆ: ಅರ್ಧ; ವೆಣ್ಣು: ಹೆಣ್ಣು; ಮಗಳು: ತನುಜೆ; ನಾಟ್ಯ: ನೃತ್ಯ; ವಿದ್ಯಾಭ್ಯಾಸ: ಶಿಕ್ಷಣ; ಸಂಗ: ಜೊತೆ; ಯಮಳರು: ಅವಳಿ ಮಕ್ಕಳು; ತುರಗ: ಅಶ್ವ; ಗೋವ್ರಜ: ಆಕಳುಗಳ ಗುಂಪು; ಭರಣ:ಕಾಪಾಡುವುದು, ರಕ್ಷಣೆ; ಬಳಿಕ: ನಂತರ; ಅರಸಿ: ರಾಣಿ; ಒಲವು: ಪ್ರೀತಿ; ಪಟ್ಟಣ: ಊರು; ಸಾರು: ಸಮೀಪಿಸು;
ಪದವಿಂಗಡಣೆ:
ಸುರಪನ್+ಅರಸಿಯ +ಶಾಪದಲಿ +ಸಿತ
ತುರಗನ್+ಅರೆವೆಣ್ಣಾಗಿ+ ಮತ್ಸ್ಯೇ
ಶ್ವರನ+ ಮಗಳಿಗೆ+ ನಾಟ್ಯ +ವಿದ್ಯಾಭ್ಯಾಸ +ಸಂಗದಲಿ
ಇರಲು +ಯಮಳರು+ ತುರಗ +ಗೋವ್ರಜ
ಭರಣರಾದರು +ಬಳಿಕ +ಪಾಂಡವರ್
ಅರಸಿ +ಸಾರಿದಳ್+ಒಲವಿನಲಿ+ ವೈರಾಟ +ಪಟ್ಟಣವ
ಅಚ್ಚರಿ:
(೧) ಸುರಪನರಸಿ, ಪಾಂಡವರರಸಿ – ಅರಸಿ ಪದದ ಬಳಕೆ – ಊರ್ವಶಿ, ದ್ರೌಪದಿಯನ್ನು ಕರೆಯುವ ಪರಿ