ಪದ್ಯ ೧೮: ಧರ್ಮಜನು ವಿರಾಟ ರಾಜನಿಗೆ ಏನು ಬೇಡಿದನು?

ಇತ್ತ ಬಿಜಯಂಗೈಯಿ ಹಿರಿಯರಿ
ದೆತ್ತಣಿಂದೈತಂದಿರೈ ಅ
ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು
ಇತ್ತಪೆವು ಬೇಡಿದುದ ನಾವೆನೆ
ಸುತ್ತ ಬಳಸೆವು ರಾಜಸೇವೆ ನಿ
ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ (ವಿರಾಟ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ವಿರಾಟನು ಧರ್ಮಜನನ್ನು ನೋಡಿ, ಅತ್ಯುತ್ತಮವಾದ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ ಮಹಾತ್ಮರನ್ನು ಕಂಡು ನಾವು ಬದುಕಿದುದು ಸಾರ್ಥಕವಯಿತು. ಎಲ್ಲಿಂದ ಬಂದಿರಿ? ಇತ್ತ ಬನ್ನಿ, ನೀವು ಬೇಡಿದುದನ್ನು ನಾವು ಕೊಡುತ್ತೇವೆ ಎಂದು ಉಪಚರಿಸಿದನು. ಧರ್ಮಜನು ನಾವು ಇದ್ದ ರಾಜನ ಓಲಗವು ಇಲ್ಲದಂತಾಯಿತು. ಆದುದರಿಂದ ರಾಜಾಶ್ರಯವನ್ನು ಬೇಡುತ್ತಿದ್ದೇವೆ, ಸುತ್ತ ಬಳಸಿ ಮಾತಾಡುವವರು ನಾವಲ್ಲ ಎಂದು ಧರ್ಮಜನು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡು; ಹಿರಿಯ: ದೊಡ್ಡವ; ಎತ್ತಣ: ಎಲ್ಲಿಂದ; ಐತಂದು: ಬಂದು ಸೇರು; ಅತ್ಯುತ್ತಮ: ಶ್ರೇಷ್ಠ; ವೇಷ: ರೂಪ; ಮಹಾತ್ಮ: ಶ್ರೇಷ್ಠ; ಕಂಡು: ನೋಡು; ಬದುಕು: ಜೀವಿಸು; ಬೇಡು: ಕೇಳು; ಸುತ್ತ: ಎಲ್ಲಾ ಕಡೆ; ಬಳಸು: ಆವರಿಸುವಿಕೆ; ರಾಜಸೇವೆ: ರಾಜ ಕಾರ್ಯ; ನಿಮಿತ್ತ: ಕಾರಣ; ಬಂದು: ಆಗಮಿಸು; ಮುನ್ನ: ಮುಂಚೆ; ಓಲಗ: ದರ್ಬಾರು; ಇತ್ತು: ನೀಡು;

ಪದವಿಂಗಡಣೆ:
ಇತ್ತ +ಬಿಜಯಂಗೈಯಿ+ ಹಿರಿಯರಿದ್
ಎತ್ತಣಿಂದ್+ಐತಂದಿರೈ+ ಅ
ತ್ಯುತ್ತಮದ +ವೇಷದ +ಮಹಾತ್ಮರ+ ಕಂಡು +ಬದುಕಿದೆವು
ಇತ್ತಪೆವು+ ಬೇಡಿದುದ+ ನಾವೆನೆ
ಸುತ್ತ +ಬಳಸೆವು+ ರಾಜಸೇವೆ +ನಿ
ಮಿತ್ತ +ಬಂದೆವು+ ಮುನ್ನಿನ್+ಓಲಗವ್+ಅಂತರಿಸಿತಾಗಿ

ಅಚ್ಚರಿ:
(೧) ಇಲ್ಲದಂತಾಗು ಎಂದು ಹೇಳಲು – ಅಂತರಿಸಿತಾಗು ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ