ಪದ್ಯ ೧೫: ಭೀಮನು ಯಾರ ಮೇಲೆ ದಾಳಿಮಾಡುವೆನೆಂದು ಹೇಳಿದನು?

ಸುರನಿಕರ ಕಾದಿರಲಿ ಮೇಣೀ
ಧರಣಿಕೊಡೆನೆಂದೆನಲಿ ಹಸ್ತಿನ
ಪುರಿಗೆ ದಾಳಿಯನಿಡುವೆನಮರರ ಮೋರೆಗಳ ತಿವಿದು
ಉರುತರಾಸ್ತ್ರವನೊಯ್ವೆನೆಂದ
ಬ್ಬರಿಸಿ ಮಾರುತಿ ನುಡಿಯೆ ತಮ್ಮನ
ಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ (ವಿರಾಟ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಈ ಆಯುಧಗಳನ್ನು ದೇವತೆಗಳೇ ಕಾದಿರಲಿ. ಈ ಭೂಮಿಯೇ ಕೊಡುವುದಿಲ್ಲ ಎನ್ನಲಿ, ದೇವತೆಗಳ ಮುಖಕ್ಕೆ ತಿವಿದು ಈ ಅಸ್ತ್ರಗಳನ್ನು ತೆಗೆದುಕೊಂಡು ಹೋಗಿ ಹಸ್ತಿನಾವತಿಯ ಮೇಲೆ ದಾಳಿಯಿಡುತ್ತೇನೆ ಎಂದು ಭೀಮನು ಅಬ್ಬರಿಸಲು, ಧರ್ಮರಾಯನು ಭೀಮನನ್ನು ಬರಸೆಳೆದು ಬಿಗಿಯಾಗಿ ಅಪ್ಪಿಕೊಂಡು ಮೈದಡವಿದನು.

ಅರ್ಥ:
ಸುರ: ದೇವತೆ; ನಿಕರ: ಗುಂಪು; ಕಾದು: ರಕ್ಷಣೆ, ಕಾಯುವುದು; ಮೇಣ್: ಅಥವ; ಧರಣಿ: ಭೂಮಿ; ದಾಳಿ: ಆಕ್ರಮಣ; ಅಮರ: ದೇವತೆ; ಮೋರೆ: ಮುಖ; ತಿವಿ: ಚುಚ್ಚು; ಉರು: ಶ್ರೇಷ್ಠ; ಅಸ್ತ್ರ: ಆಯುಧ; ಒಯ್ವೆ: ತೆಗೆದುಕೊಂಡು; ಅಬ್ಬರಿಸು: ಗರ್ಜಿಸು; ಮಾರುತಿ: ವಾಯುಪುತ್ರ; ನುಡಿ: ಮಾತಾಡು; ತಮ್ಮ: ಸಹೋದರ; ಬರಸೆಳೆ: ಹತ್ತಿರಕ್ಕೆ ಕರೆದುಕೊಂಡು; ಅಪ್ಪು: ಆಲಿಂಗನ; ಮೈದಡವಿ: ಮೈಯನ್ನು ನೇವರಿಸು; ಭೂಪಾಲ: ರಾಜ;

ಪದವಿಂಗಡಣೆ:
ಸುರ+ನಿಕರ+ ಕಾದಿರಲಿ+ ಮೇಣ್+ಈ
ಧರಣಿ+ಕೊಡೆನೆಂದ್+ಎನಲಿ +ಹಸ್ತಿನ
ಪುರಿಗೆ+ ದಾಳಿಯನ್+ಇಡುವೆನ್+ಅಮರರ +ಮೋರೆಗಳ+ ತಿವಿದು
ಉರುತರಾಸ್ತ್ರವನ್+ಒಯ್ವೆನೆಂದ್
ಅಬ್ಬರಿಸಿ +ಮಾರುತಿ +ನುಡಿಯೆ +ತಮ್ಮನ
ಬರಸೆಳೆದು +ಬಿಗಿಯಪ್ಪಿ+ ಮೈದಡವಿದನು+ ಭೂಪಾಲ

ಅಚ್ಚರಿ:
(೧) ಸುರ, ಅಮರ – ಸಮಾನಾರ್ಥಕ ಪದ
(೨) ತಮ್ಮನ ಮೇಲಿನ ಪ್ರೀತಿ – ತಮ್ಮನಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ

ನಿಮ್ಮ ಟಿಪ್ಪಣಿ ಬರೆಯಿರಿ