ಗಂಡುಗರ್ವವ ನುಡಿಯೆವೆಮ್ಮಯ
ದಂಡಿ ತಾನದು ಬೇರೆ ನಾವೀ
ಭಂಡತನದಲಿ ಬದುಕಲರಿಯೆವು ಧರ್ಮಗಿರ್ಮವನು
ಕೊಂಡು ಕೊನರುವರಲ್ಲ ರಾಯನ
ನಂಡಲೆದು ಕೀಚಕನ ತಲೆಯನು
ಚೆಂಡನಾಡಿಸು ರಮಣಿ ನೀನರ್ಜುನಗೆ ಹೇಳೆಂದ (ವಿರಾಟ ಪರ್ವ, ೩ ಸಂಧಿ, ೫೨ ಪದ್ಯ)
ತಾತ್ಪರ್ಯ:
ಎಲೈ ಪ್ರಿಯತಮೆ, ನಾನು ಗಂಡಸುತನದ ಗರ್ವದ ಮಾತನ್ನಾಡುವುದಿಲ್ಲ. ನನ್ನ ರೀತಿಯೇ ಬೇರೆ, ನಾನು ಭಂಡತನದ ಬಾಳನ್ನು ಬದುಕಲು ಇಷ್ಟಪಡುವುದಿಲ್ಲ. ಧರ್ಮಗಿರ್ಮಗಳನ್ನು ಅವಲಂಬಿಸಿ ಚಿಗುರುವವನಲ್ಲ. ಧರ್ಮರಾಯನ ಬೆನ್ನು ಹತ್ತಿ ಅವನಿಂದ ಕೀಚಕನ ತಲೆಯನ್ನು ಚೆಂಡಾಡಿಸು, ಇಲ್ಲವೇ ಅರ್ಜುನನಿಗೆ ಹೇಳು ಎಂದು ದ್ರೌಪದಿಗೆ ಸಲಹೆಯನ್ನು ನೀಡಿದನು.
ಅರ್ಥ:
ಗಂಡು: ಗಂಡಸು; ಗರ್ವ: ದರ್ಪ, ಅಹಂಕಾರ; ನುಡಿ: ಮಾತು; ದಂಡಿ: ಘನತೆ, ಹಿರಿಮೆ; ಬೇರೆ: ಅನ್ಯ; ಭಂಡ: ನಾಚಿಕೆ, ಲಜ್ಜೆ; ಬದುಕು: ಜೀವಿಸು; ಅರಿ: ತಿಳಿ; ಧರ್ಮ: ಧಾರಣ ಮಾಡಿದುದು, ನಿಯಮ; ಕೊಂಡು: ತೆಗೆದು; ಕೊನರು: ಚಿಗುರು, ಕುಡಿ; ರಾಯ: ರಾಜ; ತಲೆ: ಶಿರ; ಚೆಂಡಾಡು: ಚೆಂಡಿನಂತೆ ಎಲ್ಲೆಡೆ ಎಸೆದು ಕ್ರೀಡಿಸು; ರಮಣಿ: ಪ್ರಿಯತಮೆ; ಹೇಳು: ತಿಳಿಸು;
ಪದವಿಂಗಡಣೆ:
ಗಂಡುಗರ್ವವ +ನುಡಿಯೆವ್+ಎಮ್ಮಯ
ದಂಡಿ+ ತಾನದು+ ಬೇರೆ+ ನಾವೀ
ಭಂಡತನದಲಿ +ಬದುಕಲರಿಯೆವು +ಧರ್ಮಗಿರ್ಮವನು
ಕೊಂಡು +ಕೊನರುವರಲ್ಲ+ ರಾಯನ
ನಂಡಲೆದು+ ಕೀಚಕನ+ ತಲೆಯನು
ಚೆಂಡನಾಡಿಸು+ ರಮಣಿ+ ನೀನ್+ಅರ್ಜುನಗೆ +ಹೇಳೆಂದ
ಅಚ್ಚರಿ:
(೧) ಭೀಮನ ಸ್ವಭಾವ – ನಾವೀ ಭಂಡತನದಲಿ ಬದುಕಲರಿಯೆವು ಧರ್ಮಗಿರ್ಮವನು
(೨) ಆಡುಭಾಷೆಯ ಪ್ರಯೋಗ – ಧರ್ಮಗಿರ್ಮ