ಪದ್ಯ ೧೧: ಕನಕನು ಕೃತ್ಯೆಗೆ ಯಾವ ಕೆಲಸವನ್ನು ನೇಮಿಸಿದನು?

ಹೋಗು ಪಾಂಡವರಾಯರಿಹ ಬನ
ಕಾಗಿ ನೀನವರೈವರನು ನೆರೆ
ನೀಗುತಾಯಾಹುತಿಯನಿಂದನುವಾಗಿ ಭಕ್ಷಿಪುದು
ಬೇಗದಲಿ ಕೊಲು ಹೋಗಿಯವರನು
ಸಾಗಿಸಿಯೆಯಡಗಗ್ನಿಕುಂಡದೊ
ಳೀಗಿದುವೆ ತಾ ನೇಮವೆಂದನು ಕನಕ ಕೈಮುಗಿದು (ಅರಣ್ಯ ಪರ್ವ, ೨೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕನಕನು ಕೃತ್ಯೆಗೆ ಕೈಮುಗಿದು, ಪಾಂದವರಿರುವ ವನಕ್ಕೆ ಹೋಗಿ ಅವರನ್ನು ತಿನ್ನು. ಅವರೇ ನಿನಗಾಹುತಿ, ಶೀಘ್ರವಾಗಿ ಅವರನ್ನು ತಿಂದು, ಅಗ್ನಿಕುಂಡದಲ್ಲಿ ಅಡಗು, ಇದೇ ನೀನು ಮಾಡಬೇಕಾಗಿರುವ ಕೆಲಸ ಎಂದು ಹೇಳಿದನು.

ಅರ್ಥ:
ಹೋಗು: ತೆರಳು; ರಾಯ: ರಾಜ; ಇಹ: ವಾಸಿಸುವ; ಬನ: ಕಾಡು; ನೆರೆ: ಸಮೀಪ, ಹತ್ತಿರ, ಕೂಡು; ನೀಗು: ತಿನ್ನು; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಅನುವು: ರೀತಿ; ಭಕ್ಷಿಪುದು: ತಿನ್ನುವುದು; ಬೇಗ; ಶೀಘ್ರ; ಕೊಲು: ಸಾಯಿಸು; ಸಾಗಿಸು: ಕಳುಹಿಸು; ಅಡಗು: ಬಚ್ಚಿಟ್ಟುಕೊಳ್ಳು; ಅಗ್ನಿ: ಬೆಂಕಿ; ಕುಂಡ:ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ; ನೇಮ: ಕೆಲಸ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಹೋಗು +ಪಾಂಡವರಾಯರ್+ಇಹ +ಬನ
ಕಾಗಿ +ನೀನವರ್+ಐವರನು +ನೆರೆ
ನೀಗುತಾ+ಆಹುತಿಯನಿಂದ್+ಅನುವಾಗಿ +ಭಕ್ಷಿಪುದು
ಬೇಗದಲಿ +ಕೊಲು +ಹೋಗಿ+ಅವರನು
ಸಾಗಿಸಿಯೆ+ಅಡಗ್+ಅಗ್ನಿಕುಂಡದೊಳ್
ಈಗಿದುವೆ +ತಾ +ನೇಮವೆಂದನು+ ಕನಕ+ ಕೈಮುಗಿದು

ಅಚ್ಚರಿ:
(೧)ಅನುವಾಗಿ , ಆಹುತಿ, ಅಡಗು, ಅಗ್ನಿ, ಅವರನು – ಅ ಕಾರದ ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ