ಪದ್ಯ ೫೨: ಮುನಿಗಳು ರಾಮನ ಹಿರಿಮೆಯನ್ನು ಹೇಗೆ ಹೇಳಿದರು?

ಸಾಗರದ ತೆರೆಗಳಲಿ ಗಿರಿಗಳ
ತೂಗಿ ಸೇನೆಯ ನಡೆಸಿ ದಶಶಿರ
ನಾಗ ಹಿಂಗಿಸಿ ರಾಮ ರಮಣಿಯ ಬಿಡಿಸಿದಾಯಸವ
ಈಗಳೀ ನರರೇನನಾನುವ
ರಾ ಗರುವ ರಘುರಾಮ ವಜ್ರಕೆ
ಬೇಗಡೆಯ ವಿಧಿಮಾಡಿತೆಂದನು ಮುನಿ ನೃಪಾಲಂಗೆ (ಅರಣ್ಯ ಪರ್ವ, ೨೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಸಾಗರದ ತೆರೆಗಳ ಮೇಲೆ ಬೆಟ್ಟವನ್ನೊಟ್ಟಿ ಸೈನ್ಯವನ್ನು ನಡೆಸಿ ಹತ್ತು ತಲೆಗಳ ರಾವಣನನ್ನು ಸಂಹರಿಸಿ ಪತ್ನಿಯನ್ನು ಬಿಡಿಸಿದ. ಅವನ ಕಷ್ಟವನ್ನು ಈಗಿನ ಮನುಷ್ಯರು ಸಹಿಸಬಲ್ಲರೇ? ರಘುರಾಮನೆಂಬ ವಜ್ರಕ್ಕೆ ವಿಧಿಯು ರಂಧ್ರವನ್ನು ಕೊರೆದು ಬಿಟ್ಟಿತು.

ಅರ್ಥ:
ಸಾಗರ: ಸಮುದ್ರ; ತೆರೆ: ಅಲೆ, ತರಂಗ; ಗಿರಿ: ಬೆಟ್ಟ; ತೂಗು: ಅಲ್ಲಾಡಿಸು; ಸೇನೆ: ಸೈನ್ಯ; ನಡೆಸು: ಮುನ್ನುಗ್ಗು; ದಶಶಿರ: ಹತ್ತು ತಲೆ; ಹಿಂಗಿಸು: ನಿವಾರಿಸು, ಹೋಗಲಾಡಿಸು; ರಮಣಿ: ಪ್ರಿಯತಮೆ; ಬಿಡಿಸು: ವಿಮೋಚಿಸು; ಆಯಸ: ಬಳಲಿಕೆ, ಶ್ರಮ; ನರ: ಮನುಷ್ಯ; ಗರುವ: ಹಿರಿಯ, ಶ್ರೇಷ್ಠ; ವಜ್ರ: ಗಟ್ಟಿಯಾದ; ಬೇಗಡೆ: ಅಲಂಕಾರಕ್ಕಾಗಿ ಬಳಸುವ ಹೊಳಪಿನ ತಗಡು; ವಿಧಿ: ಬ್ರಹ್ಮ; ಮುನಿ: ಋಷಿ; ನೃಪಾಲ: ರಾಜ;

ಪದವಿಂಗಡಣೆ:
ಸಾಗರದ +ತೆರೆಗಳಲಿ +ಗಿರಿಗಳ
ತೂಗಿ +ಸೇನೆಯ +ನಡೆಸಿ +ದಶಶಿರ
ನಾಗ +ಹಿಂಗಿಸಿ +ರಾಮ +ರಮಣಿಯ +ಬಿಡಿಸಿದ್+ಆಯಸವ
ಈಗಳ್+ಈ+ ನರರ್+ಏನನಾನುವರ್
ಆ+ ಗರುವ+ ರಘುರಾಮ +ವಜ್ರಕೆ
ಬೇಗಡೆಯ +ವಿಧಿಮಾಡಿತೆಂದನು +ಮುನಿ +ನೃಪಾಲಂಗೆ

ಅಚ್ಚರಿ:
(೧) ರಾಮನ ಹಿರೆಮೆಯನ್ನು ಹೇಳುವ ಪರಿ – ಗರುವ ರಘುರಾಮ ವಜ್ರಕೆ ಬೇಗಡೆಯ ವಿಧಿಮಾಡಿತೆಂದನು

ನಿಮ್ಮ ಟಿಪ್ಪಣಿ ಬರೆಯಿರಿ