ಪದ್ಯ ೩೯: ಧರ್ಮಜನು ಪರಿಹಾರಕ್ಕೆ ಯಾರ ಕಡೆ ನೋಡಿದನು?

ಈತನಳಿಯದೆ ಮತ್ಪ್ರತಿಜ್ಞಾ
ಖ್ಯಾತಿ ಮಸುಳದೆ ತಿದ್ದುವನುವನು
ಭೂತಳಾಧಿಪ ನೀವು ಬೆಸಸುವುದೆನಲು ಮುನಿಜನವ
ಆತನೋಡಿದ ನಾವುದಿದಕನು
ನೀತಿಯೆನೆ ಧೌಮ್ಯಾದಿ ಸುಜನ
ವ್ರಾತ ನಿಶ್ಚೈಸಿದರು ಮನದಲಿ ಧರ್ಮನಿರ್ಣಯವ (ಅರಣ್ಯ ಪರ್ವ, ೨೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಭೀಮನು, ನನ್ನ ಪ್ರತಿಜ್ಞಾಭಂಗವೂ ಆಗಬಾರದು, ಇವನೂ ಬದುಕಬೇಕು, ನೀವು ನಮಗೆ ರಾಜರು, ಇದಕ್ಕೇನು ಮಾದಬೇಕೋ ನೀವೇ ತಿಳಿಸಿ ಎಂದು ಭೀಮನು ಹೇಳಲ್, ಧರ್ಮಜನು ಧೌಮ್ಯನೇ ಮೊದಲಾದ ಋಷಿಗಳನ್ನು ನೋಡಿದನು, ಅವರು ಇದಕ್ಕೆ ಪರಿಹಾರವನ್ನು ಮನಸ್ಸಿನಲ್ಲೇ ನಿಶ್ಚಯಿಸಿದರು.

ಅರ್ಥ:
ಅಳಿ: ಸಾವು; ಪ್ರತಿಜ್ಞೆ: ಶಪಥ; ಅಖ್ಯಾತಿ: ಅಪ್ರಸಿದ್ಧ; ಮಸುಳು: ಮಂಕಾಗು; ತಿದ್ದು: ಸರಿಪಡಿಸು; ಭೂತಳ: ಭೂಮಿ; ಅಧಿಪ: ರಾಜ; ಬೆಸಸು: ಹೇಳು, ಆಜ್ಞಾಪಿಸು; ಮುನಿ: ಋಷಿ; ನೋಡು: ವೀಕ್ಷಿಸು; ನೀತಿ: ಒಳ್ಳೆಯ ನಡತೆ; ಸುಜನ: ಸಜ್ಜನ; ವ್ರಾತ: ಗುಂಪು; ನಿಶ್ಚೈಸು: ನಿರ್ಧರಿಸು; ಮನ: ಮನಸ್ಸು; ನಿರ್ಣಯ: ತೀರ್ಮಾನ; ಅನುವು: ರೀತಿ;

ಪದವಿಂಗಡಣೆ:
ಈತನ್+ಅಳಿಯದೆ +ಮತ್+ಪ್ರತಿಜ್ಞ
ಅಖ್ಯಾತಿ +ಮಸುಳದೆ +ತಿದ್ದುವ್+ಅನುವನು
ಭೂತಳ+ಅಧಿಪ +ನೀವು +ಬೆಸಸುವುದ್+ಎನಲು +ಮುನಿಜನವ
ಆತ+ನೋಡಿದನ್+ ಆವ್+ಉದಿದಕ್+ಅನು
ನೀತಿಯೆನೆ +ಧೌಮ್ಯಾದಿ +ಸುಜನ
ವ್ರಾತ +ನಿಶ್ಚೈಸಿದರು+ ಮನದಲಿ+ ಧರ್ಮ+ನಿರ್ಣಯವ

ಅಚ್ಚರಿ:
(೧) ಅಳಿಯದೆ, ಮಸುಳದೆ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ