ಪದ್ಯ ೫೦: ಯಾರಿಗೆ ಪಟ್ಟಕಟ್ಟಲು ದುರ್ಯೋಧನನು ಹೇಳಿದನು?

ದೂತನಮರರಿಗಟ್ಟುವೆನೆ ತಾ
ಬೂತು ಭೀಮಾರ್ಜುನರ ಕೂಡೆ ವಿ
ಘಾತಿ ಕೈಯೊಡನುಚಿತವೇ ಕೆಡೆನುಡಿವುದೀ ಲೋಕ
ಈ ತನುವನೀ ಪರಿಯಲೇ ನಿ
ರ್ಧೂತವನೆ ಮಾಡುವೆನು ನನ್ನನು
ಜಾತನಲಿ ಭೂವಧುವ ಸೇರಿಸಿ ಬದುಕಿ ನೀವೆಂದ (ಅರಣ್ಯ ಪರ್ವ, ೨೨ ಸಂಧಿ, ೫೦ ಪದ್ಯ)

ತಾತ್ಪರ್ಯ:
ಗಂಧರ್ವರ ಬಳಿಗೆ ದೂತರನ್ನು ಕಳಿಸುವುದು ಹಾಸ್ಯಾಸ್ಪದ. ಭೀಮಾರ್ಜುನರ ಜೊತೆ ಯುದ್ಧಕ್ಕೆ ಹೋದರೆ ಲೋಕನಿಂದೆಗೆ ಪಾತ್ರನಾಗುತ್ತೇನೆ. ಉಪವಾಸದಿಂದಲೇ ಈ ದೇಹವನ್ನು ಕೊಡವಿ ಬಿಡುತ್ತೇನೆ. ನನ್ನ ತಮ್ಮನಿಗೆ ಪಟ್ಟಕಟ್ಟಿ ನೀವು ಬಾಳಿರಿ ಎಂದು ದುರ್ಯೋಧನನು ಹೇಳಿದನು.

ಅರ್ಥ:
ದೂತ: ಸೇವಕ; ಅಮರ: ದೇವತೆ; ಬೂತು: ನಾಚಕೆಗೆಟ್ಟ ಮಾತು; ಕೂಡ: ಜೊತೆ; ವಿಘಾತ: ನಾಶ, ಧ್ವಂಸ; ಕೈಯೊಡು: ಕೈ ಕೈ ಜೊತೆಗೂಡು, ಯುದ್ಧ; ಅನುಚಿತ: ಸರಿಯಲ್ಲದ; ಕೆಡು: ಹಾಳಾಗು; ನುಡಿ: ಮಾತಾಡು; ಲೋಕ: ಜಗತ್ತು; ತನು: ದೇಹ; ಪರಿ: ರೀತಿ; ನಿರ್ಧೂತ: ತೊಡೆದು ಹಾಕುವುದು; ಅನುಜಾತ: ತಮ್ಮ; ಭೂವಧು: ಭೂದೇವಿ; ಸೇರಿಸು: ಜೋಡಿಸು; ಬದುಕು: ಜೀವಿಸು;

ಪದವಿಂಗಡಣೆ:
ದೂತನ್+ಅಮರರಿಗ್+ಅಟ್ಟುವೆನೆ +ತಾ
ಬೂತು +ಭೀಮಾರ್ಜುನರ +ಕೂಡೆ +ವಿ
ಘಾತಿ +ಕೈಯೊಡ್+ಅನುಚಿತವೇ +ಕೆಡೆನುಡಿವುದೀ +ಲೋಕ
ಈ+ ತನುವನ್+ಈ+ ಪರಿಯಲೇ+ ನಿ
ರ್ಧೂತವನೆ +ಮಾಡುವೆನು +ನನ್ನ್
ಅನುಜಾತನಲಿ+ ಭೂವಧುವ +ಸೇರಿಸಿ +ಬದುಕಿ +ನೀವೆಂದ

ಅಚ್ಚರಿ:
(೧) ತಮ್ಮನಿಗೆ ಪಟ್ಟವಕಟ್ಟಿ ಎಂದು ಹೇಳುವ ಪರಿ – ನನ್ನನುಜಾತನಲಿ ಭೂವಧುವ ಸೇರಿಸಿ

ನಿಮ್ಮ ಟಿಪ್ಪಣಿ ಬರೆಯಿರಿ