ಮೊದಲು ಧೃತರಾಷ್ಟ್ರಂಗೆ ತಾ ಜನಿ
ಸಿದುದು ಬಳಿಕೀ ದೇಹ ಧರ್ಮಜ
ನುದರದಿಂದವೆ ಬಂದುದಿನ್ನವರೊಡನೆ ಮತ್ಸರವೆ
ಅದು ನಿಲಲಿ ದುರ್ವಿಷಯ ವೈರಾ
ಗ್ಯದಲಿ ದೇಹವ ಬಿಡುವೆನಲ್ಲದೆ
ಬೆದರು ಭಂಗದೊಳಿಲ್ಲ ಬಿಜಯಂಗೈಯಿ ನೀವೆಂದ (ಅರಣ್ಯ ಪರ್ವ, ೨೨ ಸಂಧಿ, ೪೩ ಪದ್ಯ)
ತಾತ್ಪರ್ಯ:
ಈ ದೇಹವು ಧೃತರಾಷ್ರನಿಗೆ ಜನಿಸಿತು, ಈಗ ಧರ್ಮಜನ ಹೊಟ್ಟೆಯಿಂದ ಮತ್ತೆ ಹುಟ್ಟಿತು ಎಂದ ಮೇಲೆ ಪಾಂಡವರೊಡನೆ ನನಗೆ ಮತ್ಸರವೇ? ದುಷ್ಟವಿಷ್ಯ ಸುಖಗಳಲ್ಲಿ ವೈರಾಗ್ಯ ಬಂದು ಈ ದೇಹವನ್ನು ಬಿಡುತ್ತಿದ್ದೇನೆ, ತಾವು ದಯಮಾಡಿಸಿ ಎಂದು ದುರ್ಯೋಧನನು ಹೇಳಿದನು.
ಅರ್ಥ:
ಮೊದಲು: ಮುಂಚೆ; ಜನಿಸು: ಹುಟ್ಟು; ಬಳಿಕ: ನಂತರ; ದೇಹ: ಕಾಯ; ಉದರ: ಹೊಟ್ಟೆ; ಮತ್ಸರ: ಹೊಟ್ಟೆಕಿಚ್ಚು; ನಿಲಲಿ: ನಿಲ್ಲು, ತಡೆ; ದುರ್ವಿಷಯ: ಕೆಟ್ಟ ವಿಚಾರ; ವೈರಾಗ್ಯ: ವಿರಕ್ತಿ; ದೇಹ: ಕಾಯ; ಬಿಡುವು: ವಿರಾಮ, ವಿಶ್ರಾಂತಿ; ಬೆದರು: ಹೆದರು; ಭಂಗ: ಮೋಸ, ವಂಚನೆ; ಬಿಜಯಂಗೈ: ದಯಮಾಡಿ, ತೆರಳು;
ಪದವಿಂಗಡಣೆ:
ಮೊದಲು +ಧೃತರಾಷ್ಟ್ರಂಗೆ +ತಾ +ಜನಿ
ಸಿದುದು +ಬಳಿಕೀ+ ದೇಹ +ಧರ್ಮಜನ್
ಉದರದಿಂದವೆ+ ಬಂದುದಿನ್+ಅವರೊಡನೆ +ಮತ್ಸರವೆ
ಅದು +ನಿಲಲಿ +ದುರ್ವಿಷಯ +ವೈರಾ
ಗ್ಯದಲಿ +ದೇಹವ +ಬಿಡುವೆನಲ್ಲದೆ
ಬೆದರು +ಭಂಗದೊಳಿಲ್ಲ +ಬಿಜಯಂಗೈಯಿ +ನೀವೆಂದ
ಅಚ್ಚರಿ:
(೧) ಜನಿಸು, ಬಂದುದು – ಸಾಮ್ಯಾರ್ಥ ಪದಗಳು
(೨) ಬ ಕಾರದ ಸಾಲು ಪದಗಳು – ಬಿಡುವೆನಲ್ಲದೆ ಬೆದರು ಭಂಗದೊಳಿಲ್ಲ ಬಿಜಯಂಗೈಯಿ