ಈಸುದಿನ ಸಾಮ್ರಾಜ್ಯ ಸೌಖ್ಯವಿ
ಲಾಸದಲಿ ಬಳಸಿದೆನು ಸಾಕಿ
ನ್ನೀ ಶರೀರವ ನೂಕಿ ನಿಲುವೆನು ಮುಕ್ತಿರಾಜ್ಯದಲಿ
ಆಶೆಯವನಿಯೊಳಿಲ್ಲ ವಿಷಯಾ
ಭ್ಯಾಸಿಗೊಮ್ಮೆ ವಿರಕ್ತಿ ದೆಸೆಯಹು
ದೈಸಲೇ ಗುರು ನೀವು ಬೆಸಸುವುದೆಂದನಾ ಭೂಪ (ಅರಣ್ಯ ಪರ್ವ, ೨೨ ಸಂಧಿ, ೪೧ ಪದ್ಯ)
ತಾತ್ಪರ್ಯ:
ಇಷ್ಟು ದಿನ ಸಾಮ್ರಾಜ್ಯ ವಿಲಾಸದ ಸೌಖ್ಯವನ್ನನುಭವಿಸಿದೆ. ಅದು ಸಾಕಾಯಿತು. ಈ ಶರೀರವನ್ನು ಬಿಟ್ಟು ಮುಕ್ತಿರಾಜ್ಯದಲ್ಲಿ ನಿಲ್ಲುತ್ತೇನೆ. ನನಗೆ ಭೂಮಿಯ ಮೇಲಿನ ಆಶೆಯಿಲ್ಲ. ನಾನು ವಿಷಯಸುಖದಲ್ಲೇ ಮಗ್ನನಾಗಿದ್ದವನು. ಅಂತಹವನಿಗೂ ಒಮ್ಮೆ ವಿರಕ್ತಿ ಬರುತ್ತದೆ, ಆದುದರಿಂದ ನೀವು ಅಪ್ಪಣೆ ನೀಡಬೇಕು ಎಂದು ಗುರುಗಳ ಸ್ಥಾನದಲ್ಲಿದ್ದ ಭೀಷ್ಮಾದಿಗಳನ್ನುದ್ದೇಶಿಸಿ ಹೇಳಿದನು.
ಅರ್ಥ:
ಈಸು: ಇಷ್ಟು; ದಿನ: ದಿವಸ; ಸಾಮ್ರಾಜ್ಯ: ರಾಜ್ಯ, ರಾಷ್ಟ್ರ; ಸೌಖ್ಯ: ಸುಖ; ವಿಲಾಸ: ವಿಹಾರ; ಬಳಸು: ಆವರಿಸುವಿಕೆ; ಸಾಕು: ತಡೆ; ಶರೀರ: ತನು; ನೂಕು: ತಳ್ಳು; ನಿಲುವೆ: ನಿಲ್ಲು; ಮುಕ್ತಿ: ಬಿಡುಗಡೆ, ವಿಮೋಚನೆ; ಆಶೆ: ಆಸೆ, ಬಯಕೆ; ಅವನಿ: ಭೂಮಿ; ವಿಷಯ: ಇಂದ್ರಿಯ ಗೋಚರವಾಗುವ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ಜ್ಞಾನೇಂದ್ರಿಯಗಳು; ಅಭ್ಯಾಸಿ: ರೂಢಿ ಮಾಡಿಕೊಂಡಿರುವವ; ವಿರಕ್ತಿ: ವೈರಾಗ್ಯ; ದೆಸೆ: ದೆಶೆ, ಅವಸ್ಥೆ; ಐಸಲೇ: ಅಲ್ಲವೇ; ಗುರು: ಆಚಾರ್ಯ; ಬೆಸಸು: ಹೇಳು, ಆಜ್ಞಾಪಿಸು; ಭೂಪ: ರಾಜ;
ಪದವಿಂಗಡಣೆ:
ಈಸುದಿನ+ ಸಾಮ್ರಾಜ್ಯ +ಸೌಖ್ಯ+ವಿ
ಲಾಸದಲಿ +ಬಳಸಿದೆನು+ ಸಾಕಿನ್
ಈ+ ಶರೀರವ +ನೂಕಿ +ನಿಲುವೆನು +ಮುಕ್ತಿ+ರಾಜ್ಯದಲಿ
ಆಶೆ+ಅವನಿಯೊಳಿಲ್ಲ+ ವಿಷಯ
ಅಭ್ಯಾಸಿಗೊಮ್ಮೆ +ವಿರಕ್ತಿ+ ದೆಸೆ+ಅಹುದ್
ಐಸಲೇ +ಗುರು +ನೀವು +ಬೆಸಸುವುದೆಂದನಾ+ ಭೂಪ
ಅಚ್ಚರಿ:
(೧) ಸಾಯುತ್ತೇನೆ ಎಂದು ಹೇಳುವ ಪರಿ – ಈ ಶರೀರವ ನೂಕಿ ನಿಲುವೆನು ಮುಕ್ತಿರಾಜ್ಯದಲಿ