ಪದ್ಯ ೩೫: ಧೃತರಾಷ್ಟ್ರನು ಏನು ಹೇಳಿದನು?

ಆದರವರಂತಿರಲಿ ನಿನಗಿ
ನ್ನೀ ದುರಾಗ್ರಹ ಬೇಡ ನಿನಗಳಿ
ವಾದೋಡೀ ಕುರುವಂಶವಳಿವುದು ಪಟ್ಟವಾವನಲಿ
ಬೀದಿಗಲಹದೊಳೊಮ್ಮೆ ಪೈಸರ
ವಾದಡದು ಪರಿಹರಿಸಿದವರೇ
ಸೋದರರಲಾ ಹೆಚ್ಚುಕುಂದೇನೆಂದನಂಧನೃಪ (ಅರಣ್ಯ ಪರ್ವ, ೨೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮಗನೊಂದಿಗೆ ಮಾತನಾಡುತ್ತಾ, ನೀನು ಹೇಳಿದವರು ಹಾಗೆಯೇ ಇರಲಿ, ಪ್ರಾಯೋಪವೇಶದ ದುರಾಗ್ರಹವನ್ನು ಬಿಟ್ಟು ಬಿಡು. ನೀನು ಹೋದರೆ ಕುರುವಂಶವೇ ಹೋದಂತೆ, ಪಟ್ಟ ಯಾರಿಗೆ? ಬೀದಿ ಜಗಳದಲ್ಲಿ ಒಮ್ಮೆ ಸೋಲಾದರೆ ಅದೇನೂ ಕುಂದಲ್ಲ. ಗೆದ್ದರೂ ಹೆಚ್ಚಲ್ಲ. ಇಷ್ಟಕ್ಕೂ ನಿನ್ನನ್ನು ಉಳಿಸಿದವರು ನಿನ್ನ ಸೋದರರಲ್ಲವೇ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ದುರಾಗ್ರಹ: ಹಟಮಾರಿತನ; ಬೇಡ: ಸಲ್ಲದು, ಕೂಡದು; ಅಳಿವು: ಸಾವು; ಪಟ್ಟ: ಸ್ಥಾನ; ಬೀದಿಗಲಹ: ಬೀದಿ ಜಗಳ; ಪೈಸರ: ಮಲ್ಲಯುದ್ಧದ ಒಂದು ಪಟ್ಟು; ಪರಿಹರ: ನಿವಾರಣೆ; ಸೋದರ: ಅಣ್ಣ ತಮ್ಮ; ಹೆಚ್ಚು: ಅಧಿಕ; ಕುಂದು: ತೊಂದರೆ; ಅಂಧ: ಕಣ್ಣಿಲ್ಲದವ; ನೃಪ: ರಾಜ;

ಪದವಿಂಗಡಣೆ:
ಆದರ್+ಅವರಂತಿರಲಿ+ ನಿನಗಿ
ನ್ನೀ +ದುರಾಗ್ರಹ +ಬೇಡ +ನಿನಗ್+ಅಳಿ
ವಾದೋಡ್+ಈ+ ಕುರುವಂಶವ್+ಅಳಿವುದು +ಪಟ್ಟವ್+ಆವನಲಿ
ಬೀದಿಗಲಹದೊಳ್+ಒಮ್ಮೆ +ಪೈಸರ
ವಾದಡ್+ಅದು +ಪರಿಹರಿಸಿದವರೇ
ಸೋದರರಲಾ+ ಹೆಚ್ಚು+ಕುಂದೇನ್+ಎಂದನ್+ಅಂಧನೃಪ

ಅಚ್ಚರಿ:
(೧) ದುರ್ಯೋಧನನ ಮೇಲಿನ ಪ್ರೀತಿ – ನಿನಗಳಿವಾದೋಡೀ ಕುರುವಂಶವಳಿವುದು ಪಟ್ಟವಾವನಲಿ

ನಿಮ್ಮ ಟಿಪ್ಪಣಿ ಬರೆಯಿರಿ