ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ನೃಪನ ತಂದು ಕೃ
ಪಾಳುವಿನ ಚರಣಾಗ್ರದಲಿ ಕೆಡಹಿದನು ಕಲಿಪಾರ್ಥ
ತೋಳ ಹಿಂಗಟ್ಟುಗಳ ಮೋರೆಯ
ಕಾಳಿಕೆಯ ಬಿಡುದಲೆಯ ನೀರೊರೆ
ವಾಲಿಗಳ ಕುರುಭೂಪನಿದ್ದನು ತಮ್ಮದಿರು ಸಹಿತ (ಅರಣ್ಯ ಪರ್ವ, ೨೨ ಸಂಧಿ, ೧ ಪದ್ಯ)
ತಾತ್ಪರ್ಯ:
ವೈಶಂಪಾಯನರು ಕಥೆಯನ್ನು ಮುಂದುವರೆಸುತ್ತಾ, ಜನಮೇಜಯ ರಾಜ ಕೇಳು, ಮಹಾ ವೀರನಾದ ಅರ್ಜುನನು ಕೌರವರಾಜನಾದ ದುರ್ಯೋಧನನನ್ನು ಚಿತ್ರಸೇನನಿಂದ ಬಿಡುಗೊಡಿಸಿ ಧರ್ಮಜನ ಚರಣಗಳ್ಳಿ ತಳ್ಳಿದನು. ಬಂಧಿಯಾಗಿದ್ದ ಕೌರವನ ತೋಳುಗಳು ಹಿಂಬದಿಯಲ್ಲಿ ಕಟ್ಟಿದ್ದವು, ಮುಖವು ಕಪ್ಪುಗೆಟ್ಟಿತ್ತು, ತಲೆಯ ಕೂದಲು ಕೆದರಿತ್ತು, ಕಣ್ಣಲ್ಲಿ ನೀರು ಜಿನುಗುತ್ತಿತ್ತು, ಹೀಗೆ ಕೌರವನು ತನ್ನ ತಮ್ಮಂದಿರ ಸಹಿತ ಧರ್ಮಜನ ಮುಂದೆ ನಿಂತನು.
ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಪಾಲ: ಒಡೆಯ, ರಕ್ಷಿಸುವವ; ನೃಪ: ರಾಜ; ತಂದು: ಬರೆಮಾಡು; ಕೃಪಾಳು: ದಯಾಳು; ಚರಣಾಗ್ರ: ಪಾದದ ಮುಂದೆ; ಕೆಡಹು: ಬೀಳಿಸು; ಕಲಿ: ಶೂರ; ತೋಳ: ಭುಜ; ಹಿಂಗಟ್ಟು: ಹಿಂಬದಿಯಲ್ಲಿ ಬಂಧಿಸು; ಮೋರೆ: ಮುಖ; ಕಾಳಿಕೆ: ಕಪ್ಪಾಗು; ಬಿಡುದಲೆ: ಕೆದರಿದ ಕೂದಲು ನೀರೊರೆ: ನೀರು ಸೋರುವಿಕೆ; ಆಲಿ: ಕಣ್ಣು; ಭೂಪ: ರಾಜ; ತಮ್ಮ: ಅನುಜ; ಸಹಿತ: ಜೊತೆ;
ಪದವಿಂಗಡಣೆ:
ಕೇಳು +ಜನಮೇಜಯ+ ಧರಿತ್ರೀ
ಪಾಲ +ಕೌರವ+ ನೃಪನ+ ತಂದು +ಕೃ
ಪಾಳುವಿನ +ಚರಣಾಗ್ರದಲಿ+ ಕೆಡಹಿದನು +ಕಲಿಪಾರ್ಥ
ತೋಳ +ಹಿಂಗಟ್ಟುಗಳ +ಮೋರೆಯ
ಕಾಳಿಕೆಯ +ಬಿಡುದಲೆಯ +ನೀರೊರೆವ್
ಆಲಿಗಳ +ಕುರುಭೂಪನಿದ್ದನು +ತಮ್ಮದಿರು+ ಸಹಿತ
ಅಚ್ಚರಿ:
(೧) ಸೋತ ಕೌರವನ ವಿವರಣೆ: ತೋಳ ಹಿಂಗಟ್ಟುಗಳ, ಮೋರೆಯ ಕಾಳಿಕೆಯ, ಬಿಡುದಲೆಯ, ನೀರೊರೆವಾಲಿಗಳ, ಕುರುಭೂಪನಿದ್ದನು