ಪದ್ಯ ೩೫: ಅರ್ಜುನನು ಧರ್ಮಜನ ಮಾತಿನ ಹಿರಿಮೆಯನ್ನು ಹೇಗೆ ಹೇಳಿದನು?

ಧರ್ಮವಾಗಲಿ ಮೇಣು ಜಗದಲ
ಧರ್ಮವಾಗಲಿ ರಾಜಮಂತ್ರದ
ಮರ್ಮವಾಗಲಿ ನೀತಿ ಬಾಹಿರವಾಗಲದು ಮೇಣು
ಧರ್ಮಪುತ್ರನ ಬೆಸನು ವೈದಿಕ
ಧರ್ಮವೆಮಗದು ರಾಜಮಂತ್ರದ
ನಿರ್ಮಲಿನ ಮತವೆಮಗೆ ಬೇರೊಂದಿಲ್ಲ ಮತವೆಂದ (ಅರಣ್ಯ ಪರ್ವ, ೨೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧರ್ಮವೋ, ಅಧರ್ಮವೋ, ರಾಜಧರ್ಮದ ರಹಸ್ಯವೋ, ನೀತಿಬಾಹಿರವೋ, ಧರ್ಮರಾಯನು ಮಾಡಿದ ಆಜ್ಞೆಯು ನಮಗೆ ವೈದಿಕ ವಿಧಿಯಿದ್ದಂತೆ, ನಮಗೆ ಅವನಾಜ್ಞೆಯೇ ರಾಜನೀತಿಯ ಅಂತಿಮ ತೀರ್ಮಾನ ಎಂದು ಅರ್ಜುನನು ಧರ್ಮಜನ್ ಆಜ್ಞೆಯ ಹಿರಿಮೆಯನ್ನು ತಿಳಿಸಿದನು.

ಅರ್ಥ:
ಧರ್ಮ: ಧಾರಣೆ ಮಾಡಿದುದು; ಮೇಣ್: ಅಥವ; ಜಗ: ಪ್ರಪಂಚ; ಅಧರ್ಮ: ನ್ಯಾಯವಲ್ಲದುದು; ರಾಜಮಂತ್ರ; ರಾಜ ನೀತಿ; ಮರ್ಮ: ಒಳ ಅರ್ಥ, ಗುಟ್ಟು; ಬಾಹಿರ: ಹೊರಗಡೆ; ಬೆಸ: ಕಾರ್ಯ; ವೈದಿಕ: ವೇದೋಕ್ತ; ನಿರ್ಮಲಿನ: ಕೆಟ್ಟದಲ್ಲದ; ಮತ: ಅಭಿಪ್ರಾಯ; ಬೇರೆ: ಅನ್ಯ;

ಪದವಿಂಗಡಣೆ:
ಧರ್ಮವಾಗಲಿ +ಮೇಣು +ಜಗದಲ್
ಅಧರ್ಮವಾಗಲಿ +ರಾಜಮಂತ್ರದ
ಮರ್ಮವಾಗಲಿ +ನೀತಿ +ಬಾಹಿರವಾಗಲದು+ ಮೇಣು
ಧರ್ಮಪುತ್ರನ+ ಬೆಸನು +ವೈದಿಕ
ಧರ್ಮವೆಮಗದು +ರಾಜಮಂತ್ರದ
ನಿರ್ಮಲಿನ +ಮತವೆಮಗೆ +ಬೇರೊಂದಿಲ್ಲ +ಮತವೆಂದ

ಅಚ್ಚರಿ:
(೧) ವಿರುದ್ಧ ಪದ – ಧರ್ಮ, ಅಧರ್ಮ
(೨) ಧರ್ಮ, ಮರ್ಮ – ಪ್ರಾಸ ಪದ
(೩) ಧರ್ಮ – ೧,೨,೪,೫ ಸಾಲಿನ ಮೊದಲ ಪದ

ನಿಮ್ಮ ಟಿಪ್ಪಣಿ ಬರೆಯಿರಿ