ಬೆಸಸ ಬೇಹುದು ನೀತಿ ಶಾಸ್ತ್ರದ
ಬೆಸುಗೆ ತಪ್ಪದೆ ರಾಜಧರ್ಮದ
ಮುಸುಡು ಕುಂದದೆ ಖೋಡಿವಿಡಿಯದೆ ಕುಶಲರಾದವರು
ಎಸಗುವದು ನಾವಾವ ಕಾರ್ಯದೊ
ಳಸುವನಿಕ್ಕಿ ತದರ್ಥವನು ಪರ
ರೆಸಗಿದೊಡೆ ನಮಗೇಕೆ ಬಾಧಕವೆಂದನಾ ಭೀಮ (ಅರಣ್ಯ ಪರ್ವ, ೨೧ ಸಂಧಿ, ೧೧ ಪದ್ಯ)
ತಾತ್ಪರ್ಯ:
ಭೀಮನು ತನ್ನ ಮಾತನ್ನು ಹೇಳುತ್ತಾ, ಅಣ್ಣಾ ನೀತಿ ಶಾಸ್ತ್ರಕ್ಕೆ ವಿರುದ್ಧವಲ್ಲದ, ರಾಜಧರ್ಮದ ಮುಖಕ್ಕೆ ಮಸಿ ಬಳಿಯದ, ತಿಳಿದವರು, ಇದು ಅಲ್ಲ ಎನ್ನುತಂತಹ ಅಪ್ಪಣೆ ಮಾಡಬೇಕು. ನಾವು ಯಾವ ಕೆಲಸವನ್ನು ಪ್ರಾಣ ಪಣವನ್ನಿಟ್ಟು ಮಾಡಬೇಕಾಗಿತ್ತೋ, ಅದನ್ನು ಬೇರೆಯವರೇ ಮಾಡಿದರೆ ನಮಗೇನು ಬಾಧಕ ಎಂದು ಬಿನ್ನಯಿಸಿದನು.
ಅರ್ಥ:
ಬೆಸಸು:ಹೇಳು, ಆಜ್ಞಾಪಿಸು; ಬೇಹುದು: ಗುಪ್ತಚಾರನ ಕೆಲಸ; ನೀತಿ: ಧರ್ಮ, ನ್ಯಾಯ; ಶಾಸ್ತ್ರ: ಸಾಂಪ್ರದಾಯಿಕವಾದ ಆಚರಣೆ, ಪದ್ಧತಿ; ಬೆಸುಗೆ: ಒಂದಾಗು; ತಪ್ಪದೆ: ಬಿಡದೆ; ರಾಜಧರ್ಮ: ಅರಸನು ಪಾಲಿಸಬೇಕಾದ ಧರ್ಮ; ಮುಸುಡು: ಮುಖ, ಮೊರೆ; ಕುಂದು: ಕಡಿಮೆಯಾಗು; ಖೋಡಿ: ದುರುಳ, ಕೊರತೆ; ಕುಶಲ: ಸರಿಯಾದ; ಎಸಗು: ಕೆಲಸ, ಉದ್ಯೋಗ; ಕಾರ್ಯ: ಕೆಲಸ; ಅಸು: ಪ್ರಾಣ; ಅರ್ಥ: ಪುರುಷಾರ್ಥ, ಆಶಯ; ಪರರು: ಬೇರೆಯವರು; ಎಸಗು: ಮಾಡು; ಬಾಧಕ: ಅಡ್ಡಿ, ಅಡಚಣೆ;
ಪದವಿಂಗಡಣೆ:
ಬೆಸಸ+ ಬೇಹುದು +ನೀತಿ +ಶಾಸ್ತ್ರದ
ಬೆಸುಗೆ +ತಪ್ಪದೆ +ರಾಜ+ಧರ್ಮದ
ಮುಸುಡು +ಕುಂದದೆ +ಖೋಡಿವಿಡಿಯದೆ+ ಕುಶಲರಾದವರು
ಎಸಗುವದು+ ನಾವ್+ಆವ+ ಕಾರ್ಯದೊಳ್
ಅಸುವನ್+ಇಕ್ಕಿ +ತದರ್ಥವನು +ಪರರ್
ಎಸಗಿದೊಡೆ +ನಮಗೇಕೆ +ಬಾಧಕವೆಂದನಾ +ಭೀಮ
ಅಚ್ಚರಿ:
(೧) ಪದ್ಯದ ಆದಿ ಮತ್ತು ಅಂತ್ಯ ಬ ಕಾರದಲ್ಲಿರುವುದು – ಬೆಸಸ ಬೇಹುದು, ಬಾಧಕವೆಂದನಾ ಭೀಮ