ಪದ್ಯ ೩: ಕೌರವನ ಸ್ತ್ರೀಯರ ಪರಿಸ್ಥಿತಿ ಹೇಗಿತ್ತು?

ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ ದಡ್ಡಿಯ
ಮೇಲುಬೀಯಗದಂಗರಕ್ಷೆಯ ಕಂಚುಕಿ ವ್ರಜದ
ಮೇಳವವದೇನಾಯ್ತೊ ಬೀದಿಯ
ಗಾಳುಮಂದಿಯ ನಡುವೆ ಕುರುಭೂ
ಪಾಲನರಸಿಯರಳುತ ಹರಿದರು ಬಿಟ್ಟಮಂಡೆಯಲಿ (ಅರಣ್ಯ ಪರ್ವ, ೨೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವರ ರಾಣೀವಾಸವನ್ನು ಗಾಳಿಯೇ ಕಾಣದು, ಎಂದ ಮೇಲೆ ಸೂರ್ಯಕಿರಣಗಳ ಸೋಂಕೆಲ್ಲಿ? ಅವರು ಓಡಾಡುವ ಕಿರುಬಾಗಿಲ ಬೀಗ, ಅವರ ಅಂಗರಕ್ಷಕರು, ಕಂಚುಕಿಗಳು ಎಲ್ಲಿ? ಬೀದಿಯ ಜನಜಾಲದ ನಡುವೆ ಕೌರವರ ಅರಸಿಯರು ತಲೆಗೆದರಿಕೊಂಡು ಅಳುತ್ತಾ ಬಂದರು.

ಅರ್ಥ:
ಗಾಳಿ: ವಾಯು; ಅರಿ: ತಿಳಿ; ರವಿ: ಭಾನು; ಕಿರಣ: ಪ್ರಕಾಶ; ಬಾಲೆ: ಹೆಂಗಸು, ಸ್ತ್ರೀ; ಗೋಚರ: ತೋರು; ದಡ್ಡಿ: ಪಂಜರ; ಅಂಗರಕ್ಷೆ: ಕಾವಲುಗಾರ; ಕಂಚುಕಿ: ಅಂತಃಪುರದ ಅಧಿಕಾರಿ; ವ್ರಜ: ಗುಂಪು; ಮೇಳ: ಗುಂಪು; ಬೀದಿ: ಕೇರಿ; ಆಳು: ಸೇವಕ; ಮಂದಿ: ಜನ; ನಡುವೆ: ಮಧ್ಯೆ; ಭೂಪಾಲ: ರಾಜ; ಅರಸಿ: ರಾಣಿ; ಅಳು: ಆಕ್ರಂದನ; ಹರಿ: ಚಲಿಸು; ಬಿಟ್ಟ: ತೊರೆ; ಮಂಡೆ: ಶಿರ;

ಪದವಿಂಗಡಣೆ:
ಗಾಳಿ+ಅರಿಯದು +ರವಿಯ +ಕಿರಣಕೆ
ಬಾಲೆಯರು +ಗೋಚರವೆ+ ದಡ್ಡಿಯ
ಮೇಲುಬೀಯಗದ್+ಅಂಗರಕ್ಷೆಯ +ಕಂಚುಕಿ +ವ್ರಜದ
ಮೇಳವವದ್+ಏನಾಯ್ತೊ +ಬೀದಿಯಗ್
ಆಳುಮಂದಿಯ+ ನಡುವೆ +ಕುರು+ಭೂ
ಪಾಲನ್+ಅರಸಿಯರ್+ಅಳುತ +ಹರಿದರು +ಬಿಟ್ಟ+ಮಂಡೆಯಲಿ

ಅಚ್ಚರಿ:
(೧) ತಲೆಗೆದರಿಕೊಂಡು ಎಂದು ಹೇಳುವ ಪರಿ – ಬಿಟ್ಟಮಂಡೆಯಲಿ
(೨) ಅಂತಃಪುರದ ರಕ್ಷಣೆಯನ್ನು ವಿವರಿಸುವ ಪರಿ – ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ

ನಿಮ್ಮ ಟಿಪ್ಪಣಿ ಬರೆಯಿರಿ