ಮುರಿದ ಬಲಗರಿಗಟ್ಟಿ ನೋಡಿತು
ಧರಣಿಪನ ಮುಂಗುಡಿಯಲೇರಿತು
ತುರಗ ಗಜ ರಥ ಹರಿಗೆ ಸಬಳ ಮುಸುಂಡಿ ಪರಿಘದಲಿ
ಉರುಬಿದನು ಖಚರೇಂದ್ರ ಕೌರವ
ರರಸನನು ಶಕುನಿ ಸೈಂಧವ
ರಿರದೆ ಹಿಂಗಿತು ಕೌರವೇಶ್ವರ ಸಿಲುಕಿದನು ಹಗೆಗೆ (ಅರಣ್ಯ ಪರ್ವ, ೨೦ ಸಂಧಿ, ೫೪ ಪದ್ಯ)
ತಾತ್ಪರ್ಯ:
ಭಂಗಗೊಂಡ ಕುರುಚತುರ್ಬಲವು ಮತ್ತೆ ಕೂಡಿ ನಾನಾ ವಿಧವಾದ ಆಯುಧಗಳಿಂದ ಚಿತ್ರಸೇನನನ್ನು ಎದುರಿಸಿತು. ಗಂಧರ್ವಪತಿಯು ಕೌರವನ ಕಡೆಗೆ ಮುಂದಕ್ಕೆ ಬಂದನು. ಶಕುನಿ ಜಯದ್ರಥರು ಹಿಂದಕ್ಕೆ ಸರಿದರು. ದುರ್ಯೋಧನನು ಚಿತ್ರಸೇನನಿಗೆ ಸೆರೆ ಸಿಕ್ಕನು.
ಅರ್ಥ:
ಮುರಿ: ಸೀಳು; ಅರಿ: ವೈರಿ, ಶತ್ರು; ಬಲ: ಸೈನ್ಯ; ಕಟ್ಟು: ಬಂಧಿಸು; ನೋಡು: ವೀಕ್ಷಿಸು; ಧರಣಿಪ: ರಾಜ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ತುರಗ: ಕುದುರೆ, ಗಜ: ಆನೆ; ರಥ: ಬಂಡಿ; ಹರಿ: ಚಲಿಸು; ಸಬಳ: ಈಟಿ, ಭರ್ಜಿ; ಮುಸುಂಡಿ: ಒಂದು ಆಯುಧ; ಪರಿಘ: ಗದೆ; ಉರುಬು: ಅತಿಶಯವಾದ ವೇಗ; ಖಚರೇಂದ್ರ: ಗಂಧರ್ವರ ಒಡೆಯ (ಚಿತ್ರಸೇನ); ಅರಸ: ರಾಜ; ಹಿಂಗು: ಬತ್ತುಹೋಗು; ಸಿಲುಕು: ಸೆರೆಯಾದ ವಸ್ತು; ಹಗೆ: ವೈರಿ, ಶತ್ರು;
ಪದವಿಂಗಡಣೆ:
ಮುರಿದ +ಬಲಗ್+ಅರಿ+ಕಟ್ಟಿ +ನೋಡಿತು
ಧರಣಿಪನ +ಮುಂಗುಡಿಯಲ್+ಏರಿತು
ತುರಗ+ ಗಜ+ ರಥ+ ಹರಿಗೆ +ಸಬಳ +ಮುಸುಂಡಿ +ಪರಿಘದಲಿ
ಉರುಬಿದನು +ಖಚರೇಂದ್ರ +ಕೌರವರ್
ಅರಸನನು+ ಶಕುನಿ+ ಸೈಂಧವರ್
ಇರದೆ+ ಹಿಂಗಿತು +ಕೌರವೇಶ್ವರ +ಸಿಲುಕಿದನು+ ಹಗೆಗೆ
ಅಚ್ಚರಿ:
(೧) ಆಯುಧಗಳ ಹೆಸರು – ಸಬಳ, ಮುಸುಂಡಿ, ಪರಿಘ;
(೨) ಧರಣಿಪ, ಕೌರವರರಸ, ಕೌರವೇಶವರ – ದುರ್ಯೋಧನನನ್ನು ಕರೆದ ಪರಿ