ಇತ್ತ ಕೌರವರಾಯ ರಥವನು
ಎತ್ತಿ ಬಿಟ್ಟನು ಖಚರರಾಯನು
ಸುತ್ತಣಿನ ಚತುರಂಗ ಸೇನೆಯನಸಮಬಾಣದಲಿ
ತೆತ್ತಿಗರ ಕರೆ ನಿನಗೆ ನೂಕದೆ
ನುತ್ತ ಶರಸಂಧಾನ ಚಯದಲಿ
ಮೆತ್ತಿದನು ಮೊನೆಗಣೆಗಳಲಿ ಖಚರೇಂದ್ರ ಕೈಮರೆಯ (ಅರಣ್ಯ ಪರ್ವ, ೨೦ ಸಂಧಿ, ೫೩ ಪದ್ಯ)
ತಾತ್ಪರ್ಯ:
ಚಿತ್ರಸೇನನು ಕೌರವನ ರಥವನ್ನು ಹಾರಿ ಹೋಗುವಂತೆ ಹೊಡೆದು, ಸುತ್ತಲಿದ್ದ ಚತುರಂಗ ಸೈನ್ಯವನ್ನು ಇದಿರಿಲ್ಲದ ಬಾಣಗಳಿಂದ ಸಂಹರಿಸಿದನು. ನಿನ್ನನ್ನು ರಕ್ಷಿಸುವವರನ್ನು ಕರೆ ನಿನ್ನ ಕೈಲಾಗದು ಎನ್ನುತ್ತಾ ಬಾಣಗಳ ಗುಂಪಿನಿಂದ ಬೆರಗಾಗುವಂತೆ ಪ್ರಹಾರ ಮಾಡಿದನು.
ಅರ್ಥ:
ರಾಯ: ರಾಜ; ರಥ: ಬಂಡಿ; ಎತ್ತು: ಮೇಲೆ ತರು; ಖಚರ: ಗಂಧರ್ವ; ಸುತ್ತಣ: ಅಕ್ಕ ಪಕ್ಕ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಸೇನೆ: ಸೈನ್ಯ; ಅಸಮ: ಅಸದೃಶವಾದ; ಬಾಣ: ಸರಳು; ತೆತ್ತಿಗ: ನಂಟ, ಬಂಧು; ಕರೆ: ಕೂಗು; ನೂಕು: ತಳ್ಳು; ಶರ: ಬಾಣ; ಸಂಧಾನ: ಸೇರಿಸುವುದು, ಹೊಂದಿಸುವುದು; ಚಯ: ಮೂಹ, ರಾಶಿ; ಮೆತ್ತು: ಬಳಿ, ಲೇಪಿಸು; ಮೊನೆ: ತುದಿ, ಕೊನೆ; ಖಚರ: ಗಂಧರ್ವ; ಕೈ ಮರೆ: ಕೈ ಅಡ್ಡವಾಗಿಡು;
ಪದವಿಂಗಡಣೆ:
ಇತ್ತ +ಕೌರವರಾಯ +ರಥವನು
ಎತ್ತಿ +ಬಿಟ್ಟನು+ ಖಚರರಾಯನು
ಸುತ್ತಣಿನ+ ಚತುರಂಗ +ಸೇನೆಯನ್+ಅಸಮ+ಬಾಣದಲಿ
ತೆತ್ತಿಗರ+ ಕರೆ+ ನಿನಗೆ +ನೂಕದ್
ಎನುತ್ತ +ಶರ+ಸಂಧಾನ +ಚಯದಲಿ
ಮೆತ್ತಿದನು +ಮೊನೆಗಣೆಗಳಲಿ+ ಖಚರೇಂದ್ರ +ಕೈಮರೆಯ
ಅಚ್ಚರಿ:
(೧) ಕೌರವರಾಯ, ಖಚರರಾಯ – ದುರ್ಯೋಧನ ಮತ್ತು ಚಿತ್ರಸೇನನನ್ನು ಕರೆದ ಪರಿ
(೨) ಚಿತ್ರಸೇನನನ್ನು ಖಚರರಾಯ, ಖಚರೇಂದ್ರ ಎಂದು ಕರೆದಿರುವುದು