ಪದ್ಯ ೩೮: ಕರ್ಣನ ಸ್ಥಿತಿ ಹೇಗಾಯಿತು?

ಜೋಡು ಹರಿದುದು ಸೀಸಕದ ದಡಿ
ಬೀಡೆ ಬಿರಿದುದು ತಲೆಯ ಚಿಪ್ಪಿನ
ಜೋಡು ಜರಿದುದು ಮನಕೆ ಸುರಿದುದು ಸೊಗಡು ರಣರಸದ
ಖೋಡಿ ಖೊಪ್ಪರಿಸಿದುದು ಧೈರ್ಯವ
ನೀಡಿರಿದುದಪದೆಸೆ ವಿಟಾಳಿಸಿ
ಖೇಡತನ ಭುಲ್ಲವಿಸುತಿರ್ದುದು ಭಾನುನಂದನನ (ಅರಣ್ಯ ಪರ್ವ, ೨೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕರ್ಣನ ಕವಚ ಕಳಚಿತು. ಶಿರಸ್ತ್ರಾಣದ ಅಡಿಯು ಬಿರುಕು ಬಿಟ್ಟಿತು. ನೆತ್ತಿಗೆ ಪೆಟ್ಟು ಬಿದ್ದು ಶಿರಸ್ತ್ರಾಣ ಜಾರಿತು. ಯುದ್ಧದ ಸೊಗಡು ಮನಸ್ಸಿಗೆ ನಾಟಿತು. ಸೋಲಿನ ಸುಳಿವು ದೊರೆಯಿತು. ಕೇಡು ಸನ್ನಿಹಿತವಾಗಿ ಧೈರ್ಯವನ್ನು ದಿಕ್ಕಾಪಾಲಾಗಿ ಓಡಿಸಿತು. ಭಯವು ಹೆಚ್ಚಿತು. ಕರ್ಣನು ಕೈಗುಂದಿದನು.

ಅರ್ಥ:
ಜೋಡು: ಕವಚ; ಹರಿ: ಸೀಳು; ಸೀಸಕ: ಶಿರಸ್ತ್ರಾಣ; ಅಡಿ: ಕೆಳಭಾಗ; ಬೀಡೆ: ಬಿರುಕು; ಬಿರಿ: ಸೀಳು; ತಲೆ: ಶಿರ; ಚಿಪ್ಪು: ತಲೆಯ ಮೇಲುಭಾಗ; ಜರಿ: ಜಾರು; ಮನ: ಮನಸ್ಸು; ಸುರಿ: ಮೇಲಿನಿಂದ ಬೀಳು; ಸೊಗಡು: ಕಂಪು, ವಾಸನೆ; ರಣ: ಯುದ್ಧ; ರಸ: ಸಾರ; ಖೋಡಿ: ದುರುಳತನ, ನೀಚತನ; ಖೊಪ್ಪರಿಸು: ಮೀರು, ಹೆಚ್ಚು; ಧೈರ್ಯ: ಕೆಚ್ಚು, ದಿಟ್ಟತನ; ನೀಡು: ಕೊಡು; ಇರಿ: ಚುಚ್ಚು; ಅಪದೆಸೆ: ಕೆಡುಕು; ವಿಟಾಳ:ಅಪವಿತ್ರತೆ, ಮಾಲಿನ್ಯ; ಖೇಡ: ಹೆದರಿದವನು; ಭುಲ್ಲವಿಸು: ಅತಿಶಯಿಸು, ಅಧಿಕಗೊಳ್ಳು; ಭಾನು: ಸೂರ್ಯ; ನಂದನ: ಮಗ;

ಪದವಿಂಗಡಣೆ:
ಜೋಡು +ಹರಿದುದು +ಸೀಸಕದದ್ +ಅಡಿ
ಬೀಡೆ +ಬಿರಿದುದು +ತಲೆಯ +ಚಿಪ್ಪಿನ
ಜೋಡು +ಜರಿದುದು +ಮನಕೆ +ಸುರಿದುದು +ಸೊಗಡು +ರಣರಸದ
ಖೋಡಿ +ಖೊಪ್ಪರಿಸಿದುದು +ಧೈರ್ಯವನ್
ಈಡಿರಿದುದ್+ಅಪದೆಸೆ +ವಿಟಾಳಿಸಿ
ಖೇಡತನ +ಭುಲ್ಲವಿಸುತಿರ್ದುದು +ಭಾನುನಂದನನ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ಖೋಡಿ ಖೊಪ್ಪರಿಸಿದುದು; ಭುಲ್ಲವಿಸುತಿರ್ದುದು ಭಾನುನಂದನನ; ಸುರಿದುದು ಸೊಗಡು;

ನಿಮ್ಮ ಟಿಪ್ಪಣಿ ಬರೆಯಿರಿ