ಪದ್ಯ ೩೪: ಕೃಷ್ಣನು ದ್ರೌಪದಿಯನ್ನು ಏನು ಕೇಳಿದ?

ಧ್ಯಾನಗೋಚರನಾಗಿ ವನಿತೆಯ
ಮಾನಸದಲಿಹ ಪರಮಹಂಸನು
ಮಾನುಷಾಕೃತಿಯಾಗಿ ತೋರಿದ ಬಾಹ್ಯರಚನೆಯಲಿ
ಮಾನಿನಿಯ ಮೈದಡಹಿ ಚಿಂತೆಯ
ದೇನು ತಂಗಿ ಲತಾಂಗಿ ಹೇಳೌ
ಮೌನ ಮುದ್ರೆಯದೇನೆನಲು ಕಂದೆರೆದಳಿಂದುಮುಖಿ (ಅರಣ್ಯ ಪರ್ವ, ೧೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ದ್ರೌಪದಿಯ ಧ್ಯಾನ ಕಾಲದಲ್ಲಿ ಅವಳ ಮನಸ್ಸಿನಲ್ಲಿ ಕಾಣುತ್ತಿದ್ದ ಪರಮಹಂಸನು ಹೊರಗಡೆ ಮಾನವನ ರೂಪದಲ್ಲಿ ಅವಳ ಬಳಿ ಬಂದನು. ಅವಳ ಮೈದಡವಿ, ತಂಗಿ ನಿನಗೇನು ಚಿಂತೆ? ಹೇಳು, ಏಕೆ ಮೌನದಿಂದಿರುವೆ ಎಂದು ಕೇಳಿದನು.

ಅರ್ಥ:
ಧ್ಯಾನ: ಏಕಾಗ್ರತೆ; ಗೋಚರ: ಕಾಣಿಸು; ವನಿತೆ: ಹೆಣ್ಣು; ಮಾನಸ: ಮನಸ್ಸು; ಪರಮಹಂಸ: ಯತಿ, ಶ್ರೇಷ್ಠವರ್ಗದ ಸನ್ಯಾಸಿ; ಮಾನುಷ: ಮಾನವ; ಆಕೃತಿ: ರೂಪ; ತೋರು: ಗೋಚರಿಸು; ಬಾಹ್ಯ: ಹೊರ; ರಚನೆ: ನಿರ್ಮಾಣ, ಸೃಷ್ಟಿ; ಮಾನಿನಿ: ಹೆಣ್ಣು; ಮೈದಡಹು: ದೇಹವನ್ನು ತಟ್ಟು; ಚಿಂತೆ: ಯೋಚನೆ; ಹೇಳು: ತಿಳಿಸು; ಮೌನ: ಮಾತನಾಡದಿರುವಿಕೆ; ಮುದ್ರೆ: ಚಿಹ್ನೆ; ಕಂದೆರೆ: ಕಣ್ಣ ಬಿಡು; ಇಂದುಮುಖಿ: ಚಂದ್ರನಂತ ಕಣ್ಣುಳ್ಳವಳು;

ಪದವಿಂಗಡಣೆ:
ಧ್ಯಾನ+ಗೋಚರನಾಗಿ +ವನಿತೆಯ
ಮಾನಸದಲಿಹ +ಪರಮಹಂಸನು
ಮಾನುಷಾಕೃತಿಯಾಗಿ +ತೋರಿದ +ಬಾಹ್ಯ+ರಚನೆಯಲಿ
ಮಾನಿನಿಯ+ ಮೈದಡಹಿ+ ಚಿಂತೆಯ
ದೇನು+ ತಂಗಿ+ ಲತಾಂಗಿ+ ಹೇಳೌ
ಮೌನ +ಮುದ್ರೆಯದೇನ್+ಎನಲು+ ಕಂದೆರೆದಳ್+ಇಂದುಮುಖಿ

ಅಚ್ಚರಿ:
(೧) ದ್ರೌಪದಿಯನ್ನು ಕರೆದ ಪರಿ – ವನಿತೆ, ಮಾನಿನಿ, ತಂಗಿ, ಲತಾಂಗಿ, ಇಂದುಮುಖಿ

ನಿಮ್ಮ ಟಿಪ್ಪಣಿ ಬರೆಯಿರಿ