ಪದ್ಯ ೩೧: ಪಾಂಡವರು ಯಾರನ್ನು ಕಂಡರು?

ಅವನಿಪತಿ ಕೇಳಖಿಳ ನಿಗಮ
ಸ್ತವಕೆ ತಾನೆಡೆಗುಡದ ಮಹಿಮಾ
ರ್ಣವನನೇಸು ಭವಂಗಳಲಿ ಭಜಿಸಿದರೊ ಪಾಂಡವರು
ಯುವತಿಯಕ್ಕೆಯ ಸೈರಿಸದೆ ಯಾ
ದವ ಶಿರೋಮಣಿ ಸುಳಿದನಾ ಪಾಂ
ಡವರು ಕಂಡರು ದೂರದಲಿ ಖಗರಾಜ ಕೇತನವ (ಅರಣ್ಯ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ವೇದಸ್ತುತಿಗೆ ಕಾಣಿಸಿಕೊಳ್ಳದ ಮಹಿಮಾಮೃತನಾದ ಶೀರ್ಕೃಷ್ಣನನ್ನು ಎಷ್ಟು ಜನ್ಮಗಳಲ್ಲಿ ಪಾಂಡವರು ಭಜಿಸಿದ್ದರೋ ಏನೋ, ದ್ರೌಪದಿಯ ಪ್ರಲಾಪವನ್ನು ಸಹಿಸಲಾರದೆ ಶ್ರೀಕೃಷ್ಣನು ಅಲ್ಲಿ ಸುಳಿದನು. ಶ್ರೀಕೃಷ್ಣ ಗರುಡ ಧ್ವಜವನ್ನು ಪಾಂಡವರು ದೂರದಲ್ಲಿ ನೋಡಿದರು.

ಅರ್ಥ:
ಅವನಿಪತಿ: ರಾಜ; ಅವನಿ: ಭೂಮಿ; ಕೇಳು: ಆಲಿಸು; ಅಖಿಳ: ಎಲ್ಲಾ; ನಿಗಮ: ವೇದ; ಸ್ತವ: ಕೊಂಡಾಡುವುದು; ಎಡೆಗೊಡು: ಅವಕಾಶಕೊಡು; ಮಹಿಮಾರ್ಣವ: ಮಹಾಮಹಿಮ, ಶ್ರೇಷ್ಠ; ಭವ:ಸಂಸಾರ, ಪ್ರಾಪಂಚಿಕ ವ್ಯವಹಾರ; ಭಜಿಸು: ಪೂಜಿಸು; ಯುವತಿ: ಹೆಣ್ಣು; ಅಕ್ಕೆ: ಅಳುವಿಕೆ, ಪ್ರಳಾಪ; ಸೈರಿಸು: ತಾಳು, ಸಹಿಸು; ಶಿರೋಮಣಿ: ತಿಲಕ, ಶ್ರೇಷ್ಠ; ಸುಳಿ: ಆವರಿಸು, ಮುತ್ತು; ಕಂಡು: ನೋಡು; ದೂರ: ಅಂತರ; ಖಗರಾಜ: ಗರುಡ; ಕೇತನ: ಬಾವುಟ;

ಪದವಿಂಗಡಣೆ:
ಅವನಿಪತಿ+ ಕೇಳ್+ಅಖಿಳ +ನಿಗಮ
ಸ್ತವಕೆ+ ತಾನ್+ಎಡೆಗುಡದ +ಮಹಿಮಾ
ರ್ಣವನನ್+ಏಸು +ಭವಂಗಳಲಿ +ಭಜಿಸಿದರೊ +ಪಾಂಡವರು
ಯುವತಿ+ಅಕ್ಕೆಯ +ಸೈರಿಸದೆ +ಯಾ
ದವ +ಶಿರೋಮಣಿ +ಸುಳಿದನಾ+ ಪಾಂ
ಡವರು +ಕಂಡರು+ ದೂರದಲಿ+ ಖಗರಾಜ+ ಕೇತನವ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಯಾದವ ಶಿರೋಮಣಿ; ಮಹಿಮಾರ್ಣವ, ಖಗರಾಜ ಕೇತನ

ನಿಮ್ಮ ಟಿಪ್ಪಣಿ ಬರೆಯಿರಿ