ಅವನಿಪತಿ ಕೇಳಖಿಳ ನಿಗಮ
ಸ್ತವಕೆ ತಾನೆಡೆಗುಡದ ಮಹಿಮಾ
ರ್ಣವನನೇಸು ಭವಂಗಳಲಿ ಭಜಿಸಿದರೊ ಪಾಂಡವರು
ಯುವತಿಯಕ್ಕೆಯ ಸೈರಿಸದೆ ಯಾ
ದವ ಶಿರೋಮಣಿ ಸುಳಿದನಾ ಪಾಂ
ಡವರು ಕಂಡರು ದೂರದಲಿ ಖಗರಾಜ ಕೇತನವ (ಅರಣ್ಯ ಪರ್ವ, ೧೭ ಸಂಧಿ, ೩೧ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ವೇದಸ್ತುತಿಗೆ ಕಾಣಿಸಿಕೊಳ್ಳದ ಮಹಿಮಾಮೃತನಾದ ಶೀರ್ಕೃಷ್ಣನನ್ನು ಎಷ್ಟು ಜನ್ಮಗಳಲ್ಲಿ ಪಾಂಡವರು ಭಜಿಸಿದ್ದರೋ ಏನೋ, ದ್ರೌಪದಿಯ ಪ್ರಲಾಪವನ್ನು ಸಹಿಸಲಾರದೆ ಶ್ರೀಕೃಷ್ಣನು ಅಲ್ಲಿ ಸುಳಿದನು. ಶ್ರೀಕೃಷ್ಣ ಗರುಡ ಧ್ವಜವನ್ನು ಪಾಂಡವರು ದೂರದಲ್ಲಿ ನೋಡಿದರು.
ಅರ್ಥ:
ಅವನಿಪತಿ: ರಾಜ; ಅವನಿ: ಭೂಮಿ; ಕೇಳು: ಆಲಿಸು; ಅಖಿಳ: ಎಲ್ಲಾ; ನಿಗಮ: ವೇದ; ಸ್ತವ: ಕೊಂಡಾಡುವುದು; ಎಡೆಗೊಡು: ಅವಕಾಶಕೊಡು; ಮಹಿಮಾರ್ಣವ: ಮಹಾಮಹಿಮ, ಶ್ರೇಷ್ಠ; ಭವ:ಸಂಸಾರ, ಪ್ರಾಪಂಚಿಕ ವ್ಯವಹಾರ; ಭಜಿಸು: ಪೂಜಿಸು; ಯುವತಿ: ಹೆಣ್ಣು; ಅಕ್ಕೆ: ಅಳುವಿಕೆ, ಪ್ರಳಾಪ; ಸೈರಿಸು: ತಾಳು, ಸಹಿಸು; ಶಿರೋಮಣಿ: ತಿಲಕ, ಶ್ರೇಷ್ಠ; ಸುಳಿ: ಆವರಿಸು, ಮುತ್ತು; ಕಂಡು: ನೋಡು; ದೂರ: ಅಂತರ; ಖಗರಾಜ: ಗರುಡ; ಕೇತನ: ಬಾವುಟ;
ಪದವಿಂಗಡಣೆ:
ಅವನಿಪತಿ+ ಕೇಳ್+ಅಖಿಳ +ನಿಗಮ
ಸ್ತವಕೆ+ ತಾನ್+ಎಡೆಗುಡದ +ಮಹಿಮಾ
ರ್ಣವನನ್+ಏಸು +ಭವಂಗಳಲಿ +ಭಜಿಸಿದರೊ +ಪಾಂಡವರು
ಯುವತಿ+ಅಕ್ಕೆಯ +ಸೈರಿಸದೆ +ಯಾ
ದವ +ಶಿರೋಮಣಿ +ಸುಳಿದನಾ+ ಪಾಂ
ಡವರು +ಕಂಡರು+ ದೂರದಲಿ+ ಖಗರಾಜ+ ಕೇತನವ
ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಯಾದವ ಶಿರೋಮಣಿ; ಮಹಿಮಾರ್ಣವ, ಖಗರಾಜ ಕೇತನ