ತುಡುಕಿ ಸುರಪನ ಸಿರಿಯ ಶರಧಿಯ
ಮಡುವಿನಲಿ ಹಾಯ್ಕಿದನು ರೋಷವ
ಹಿಡಿದೊಡೀಗಲೆ ಸುಟ್ಟು ಬೊಟ್ಟಿಡುವನು ಜಗತ್ರಯವ
ಮೃಡಮುನೀಶನು ತನಗೆ ಶಾಪವ
ಕೊಡಲಿ ತಾನದಕಂಜೆ ತನ್ನಯ
ನುಡಿಗನೃತ ಸಂದಪ್ಪವಾದರೆ ಕೆಟ್ಟೆ ತಾನೆಂದ (ಅರಣ್ಯ ಪರ್ವ, ೧೭ ಸಂಧಿ, ೧೭ ಪದ್ಯ)
ತಾತ್ಪರ್ಯ:
ದೂರ್ವಾಸ ಮುನಿಗಳು ಹಿಂದೆ ಕೋಪದಿಂದ ದೇವೇಂದ್ರನ ಐಶ್ವರ್ಯವನ್ನು ಸಾಗರದ ಮಡುವಿನಲ್ಲಿ ಮುಳುಗಿಸಿದನು. ಈಗಲೂ ಕೋಪಗೊಂಡರೆ ಮೂರು ಲೋಕಗಳನ್ನು ಸುಟ್ಟು ಭಸ್ಮವನ್ನು ಹಣೆಗೆ ಧಾರಣೆ ಮಾಡಬಲ್ಲ. ಶಿವನ ಅವತಾರವಾದ ಈ ದೂರ್ವಾಸ ಮುನಿಗಳು ನನಗೆ ಶಾಪವನ್ನು ಕೊಟ್ಟರೆ ನನಗೆ ಹೆದರಿಕೆಯಿಲ್ಲ, ಆದರೆ ನನ್ನ ಮಾತು ಸುಳ್ಳಾದರೆ ನಾನು ಕೆಟ್ಟೆ ಎಂದು ಧರ್ಮಜನು ಹೇಳಿದನು.
ಅರ್ಥ:
ತುಡುಕು: ಆತುರದಿಂದ ಹಿಡಿ; ಸುರಪ: ಇಂದ್ರ; ಸಿರಿ: ಐಶ್ವರ್ಯ; ಶರಧಿ: ಸಾಗರ; ಮಡು: ನದಿ, ಹೊಳೆ; ಹಾಯ್ಕು: ಸೇರಿಸಿಕೊಳ್ಳು; ರೋಷ: ಕೋಪ; ಹಿಡಿ: ಗ್ರಹಿಸು; ಸುಟ್ಟು: ದಹಿಸು; ಬೊಟ್ಟಿಡು: ಹಣೆಗೆ ಬಳೆದುಕೋ; ಜಗತ್ರಯ: ಮೂರು ಲೋಕ; ಮೃಡ: ಶಿವ; ಮುನಿ: ಋಷಿ; ಈಶ: ಒಡೆಯ; ಶಾಪ: ಕೆಡುಕಾಗಲೆಂದು ಬಯಸಿ ಹೇಳುವ ಮಾತು; ಕೊಡಲಿ: ಪರಶು;ಅಂಜು: ಹೆದರು; ನುಡಿ: ಮಾತು; ಅನೃತ: ಸುಳ್ಳು; ಸಂದು: ಬಿರುಕು; ಕೆಟ್ಟೆ: ಕೆಡುಕು, ಹಾಳು;
ಪದವಿಂಗಡಣೆ:
ತುಡುಕಿ +ಸುರಪನ+ ಸಿರಿಯ +ಶರಧಿಯ
ಮಡುವಿನಲಿ +ಹಾಯ್ಕಿದನು +ರೋಷವ
ಹಿಡಿದೊಡ್+ಈಗಲೆ +ಸುಟ್ಟು +ಬೊಟ್ಟಿಡುವನು +ಜಗತ್ರಯವ
ಮೃಡ+ಮುನೀಶನು +ತನಗೆ+ ಶಾಪವ
ಕೊಡಲಿ +ತಾನದಕ್+ಅಂಜೆ+ ತನ್ನಯ
ನುಡಿಗ್+ಅನೃತ+ ಸಂದಪ್ಪವಾದರೆ+ ಕೆಟ್ಟೆ +ತಾನೆಂದ
ಅಚ್ಚರಿ:
(೧) ದೂರ್ವಾಸನ ಪ್ರತಾಪ – ತುಡುಕಿ ಸುರಪನ ಸಿರಿಯ ಶರಧಿಯ ಮಡುವಿನಲಿ ಹಾಯ್ಕಿದನು