ಪದ್ಯ ೬: ದೂರ್ವಾಸನು ದುರ್ಯೋಧನನಿಗೆ ಏನು ಹೇಳಿದ?

ಷಡುರಸಾನ್ನದಲಾದರಣೆಯಿಂ
ದುಡುಗೆಯಿಂದವೆ ತುಷ್ಟಿಬಡಿಸಿದ
ಪೊಡವಿಪಾಲಕ ಮುನಿಗಳಷ್ಟಾಶೀತಿ ಸಾವಿರವ
ಕಡುಸುಖದ ಸಂನ್ಯಾಸಿ ವೇಷದ
ಮೃಡನು ಮುದದಲಿ ಕೌರವನ ಮೈ
ದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನೀನೆಂದ (ಅರಣ್ಯ ಪರ್ವ, ೧೭ ಸಂಧಿ, ೬ ಪದ್ಯ)

ತಾತ್ಪರ್ಯ:
ಷಡ್ರಸಗಳಿಂದ ಕೂಡಿದ ರುಚಿಯಾದ ಊಟವನ್ನು ಮಾಡಿ, ಉತ್ತಮ ಉಡುಗೆಗಳನ್ನು ದುರ್ಯೋಧನನು ನೀಡಿ, ಎಂಬತ್ತೆಂಟು ಸಾವಿರ ಮುನಿಗಳನ್ನು ದುರ್ಯೋಧನನು ತೃಪ್ತಿ ಪಡಿಸಿದನು. ಸಂನ್ಯಾಸಿಯ ವೇಷ ಧರಿಸಿದ ಆನಂದಘನ ಶಿವನು ಸಂತೋಷಿಸಿ, ಕೌರವನ ಮೈದಡವಿ ಮಗನೆ, ನಿನಗೆ ಏನು ಬೇಕೋ ಕೇಳು ಎಂದನು.

ಅರ್ಥ:
ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಅನ್ನ: ಊಟ, ಭೋಜನ; ಆದರಣೆ: ಗೌರವ; ಉಡುಗೆ: ವಸ್ತ್ರ, ಬಟ್ಟೆ; ತುಷ್ಟಿ: ಸಂತಸ; ಪೊಡವಿ: ಪೃಥ್ವಿ, ಭೂಮಿ; ಪಾಲಕ: ಒಡೆಯ; ಪೊಡವಿಪಾಲಕ: ರಾಜ; ಮುನಿ: ಋಷಿ; ಸಾವಿರ: ಸಹಸ್ರ; ಕಡು:ತುಂಬ; ಸುಖ: ನೆಮ್ಮದಿ; ಸಂನ್ಯಾಸಿ: ಋಷಿ; ವೇಷ: ಉಡುಗೆ ತೊಡುಗೆ; ಮೃಡ: ಶಿವ; ಮುದ: ಸಂತಸ; ಮೈದಡವಿ: ಮೈಯನ್ನು ಸವರಿ; ಮೈ: ತನು; ಮೆಚ್ಚಿ: ಪ್ರಶಂಶಿಸಿ; ಮಗ: ಪುತ್ರ; ಬೇಡು: ಕೇಳು; ಒಲಿದು: ಒಪ್ಪು, ಬಯಸು;

ಪದವಿಂಗಡಣೆ:
ಷಡುರಸಾನ್ನದಲ್+ಆದರಣೆಯಿಂದ್
ಉಡುಗೆಯಿಂದವೆ+ ತುಷ್ಟಿ+ಬಡಿಸಿದ
ಪೊಡವಿಪಾಲಕ+ ಮುನಿಗಳ್+ಅಷ್ಟಾಶೀತಿ +ಸಾವಿರವ
ಕಡು+ಸುಖದ +ಸಂನ್ಯಾಸಿ +ವೇಷದ
ಮೃಡನು +ಮುದದಲಿ +ಕೌರವನ +ಮೈ
ದಡವಿ +ಮೆಚ್ಚಿದೆ +ಮಗನೆ +ಬೇಡ್+ಒಲಿದುದನು+ ನೀನೆಂದ

ಅಚ್ಚರಿ:
(೧) ದೂರ್ವಾಸನನ್ನು ವಿವರಿಸುವ ಪರಿ – ಕಡುಸುಖದ ಸಂನ್ಯಾಸಿ ವೇಷದ ಮೃಡನು ಮುದದಲಿ ಕೌರವನ ಮೈದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನೀನೆಂದ

ನಿಮ್ಮ ಟಿಪ್ಪಣಿ ಬರೆಯಿರಿ