ಪದ್ಯ ೨: ಹಸ್ತಿನಾಪುರಕ್ಕೆ ಯಾವ ಮುನಿಗಳು ಬಂದರು?

ಆ ಸುಯೋಧನನೇಕಛತ್ರ ವಿ
ಳಾಸದುರ್ವೀರಾಜ್ಯ ಪದವಿ
ನ್ಯಾಸ ವಿಭವದ ಸುಲಭ ಸೌಖ್ಯವನನುಭವಿಸುತಿರಲು
ಭೂಸುರವ್ರಜವೆರಸಿ ವರ ವಿ
ನ್ಯಾಸ ಮುನಿಜನ ಸಹಿತಲಾ ದೂ
ರ್ವಾಸ ಮುನಿಪತಿ ಬಂದು ಹೊಕ್ಕನು ಹಸ್ತಿನಾಪುರವ (ಅರಣ್ಯ ಪರ್ವ, ೧೭ ಸಂಧಿ, ೨ ಪದ್ಯ)

ತಾತ್ಪರ್ಯ:
ಇತ್ತ ಹಸ್ತಿನಾಪುರದಲ್ಲಿ ದುರ್ಯೋಧನನು ಏಕಚ್ಛತ್ರಾಧಿಪತಿಯಾಗಿ ರಾಜ್ಯಸುಖವನ್ನನುಭವಿಸುತ್ತಿದ್ದನು. ಒಂದು ದಿನ ದೂರ್ವಾಸ ಮುನಿಯು ಅನೇಕ ಬ್ರಾಹ್ಮಣರೊಡನೆ ಹಸ್ತಿನಾವತಿಗೆ ಬಂದನು.

ಅರ್ಥ:
ವಿಳಾಸ: ಉಲ್ಲಾಸ, ಸಂಭ್ರಮ; ಉರ್ವೀ: ಭೂಮಿ; ರಾಜ್ಯ: ದೇಶ; ಪದ: ಅವಸ್ಥೆ; ವಿನ್ಯಾಸ: ರಚನೆ; ವಿಭವ: ಸಿರಿ, ಸಂಪತ್ತು; ಸುಲಭ: ಆಯಾಸವಿಲ್ಲದೆ; ಸೌಖ್ಯ: ಸುಖ, ನೆಮ್ಮದಿ; ಅನುಭವ: ಅನುಭಾವ; ಭೂಸುರ: ಬ್ರಾಹ್ಮಣ; ವ್ರಜ: ಗುಂಪು; ವರ: ಶ್ರೇಷ್ಠ; ಸಹಿತ: ಜೊತೆ; ಮುನಿ: ಋಷಿ; ಹೊಕ್ಕು: ಸೇರು; ಬಂದು: ಆಗಮಿಸು;

ಪದವಿಂಗಡಣೆ:
ಆ+ ಸುಯೋಧನನ್+ಏಕಛತ್ರ+ ವಿ
ಳಾಸದ್+ಉರ್ವೀ+ರಾಜ್ಯ +ಪದ+ವಿ
ನ್ಯಾಸ +ವಿಭವದ +ಸುಲಭ +ಸೌಖ್ಯವನ್+ಅನುಭವಿಸುತಿರಲು
ಭೂಸುರ+ವ್ರಜವೆರಸಿ+ ವರ+ ವಿ
ನ್ಯಾಸ +ಮುನಿಜನ +ಸಹಿತಲಾ+ ದೂ
ರ್ವಾಸ +ಮುನಿಪತಿ +ಬಂದು +ಹೊಕ್ಕನು +ಹಸ್ತಿನಾಪುರವ

ಅಚ್ಚರಿ:
(೧) ಪದವಿನ್ಯಾಸ, ವರವಿನ್ಯಾಸ – ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ