ಪದ್ಯ ೧: ಪಾಂಡವರು ಎಷ್ಟು ವರ್ಷ ವನವಾಸ ಮುಗಿಸಿದ್ದರು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡು ಕುಮಾರಕರು ವಿಪಿ
ನಾಲಯದೊಳನುಭವಿಸಿದರು ದಶಸಂವತ್ಸರಂಗಳನು
ಲೀಲೆಮಿಗೆಯೈತಂದು ಯಮುನಾ
ಕೂಲದಲಿ ವರತೀರ್ಥಸೇವಾ
ಶೀಲರಿದ್ದರು ಸಕಲ ಮುನಿಜನ ಸಹಿತ ಹರುಷದಲಿ (ಅರಣ್ಯ ಪರ್ವ, ೧೭ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವರು ವನವಾಸದಲ್ಲಿ ಹತ್ತು ವರ್ಷಗಳನ್ನು ಕಳೆದು, ಯಮುನಾ ನದಿಯ ತೀರಕ್ಕೆ ಬಂದು, ಸಮಸ್ತ ಮುನಿಗಳೊಡನೆ ತೀರ್ಥ ಸೇವೆಯನ್ನು ಮಾಡುತ್ತಿದ್ದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರಿ: ಭೂಮಿ; ಕುಮಾರ: ಮಕ್ಕಳು; ವಿಪಿನ: ಅರಣ್ಯ; ಆಲಯ: ಮನೆ; ಅನುಭವ: ಅನುಭಾವ; ದಶ: ಹತ್ತು; ಸಂವತ್ಸರ: ವರ್ಷ; ಲೀಲೆ: ಆನಂದ, ಸಂತೋಷ; ಕೂಲ:ದಡ, ತಟ; ವರ: ಶ್ರೇಷ್ಠ; ತೀರ್ಥ: ಪವಿತ್ರವಾದ ಜಲ; ಶೀಲ: ನಡತೆ, ಸ್ವಭಾವ; ಸಕಲ: ಎಲ್ಲಾ; ಮುನಿ: ಋಷಿ; ಸಹಿತ: ಜೊತೆ; ಹರುಷ: ಸಂತಸ; ಐತಂದು: ಬಂದು ಸೇರು;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ಪಾಂಡು +ಕುಮಾರಕರು +ವಿಪಿ
ನಾಲಯದೊಳ್+ಅನುಭವಿಸಿದರು +ದಶ+ಸಂವತ್ಸರಂಗಳನು
ಲೀಲೆಮಿಗೆ+ಐತಂದು +ಯಮುನಾ
ಕೂಲದಲಿ +ವರ+ತೀರ್ಥ+ಸೇವಾ
ಶೀಲರಿದ್ದರು +ಸಕಲ+ ಮುನಿಜನ +ಸಹಿತ +ಹರುಷದಲಿ

ನಿಮ್ಮ ಟಿಪ್ಪಣಿ ಬರೆಯಿರಿ